ಶಿರಾಳಕೊಪ್ಪ: ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬರುವುದಕ್ಕೂ ಮುನ್ನ ಮಠ, ಮಂದಿರಗಳು ಇಷ್ಟೊಂದು ಅನುದಾನ ಪಡೆಯಬಹುದು ಎಂದು ಗೊತ್ತೇ ಇರಲಿಲ್ಲ’ ಎಂದು ಶ್ರೀ ಶೈಲ ಪೀಠದ ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಶಕ್ತಿ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
‘ಅವರು ವೀರಶೈವ ಮಠಗಳಿಗೆ ಮಾತ್ರವಲ್ಲದೆ, ಹಿಂದುಳಿದ, ಪರಿಶಿಷ್ಟ ಜಾತಿ ಸೇರಿ ಎಲ್ಲ ಜಾತಿ, ಮತ, ಪಂಥಗಳ ಸಮುದಾಯಗಳಿಗೆ ಅನುದಾನ ನೀಡಿದ್ದಾರೆ. ಯಡಿಯೂರಪ್ಪ ಅವರಿಗೆ 81 ವರ್ಷ ಆಗಿದ್ದರೂ 18 ವರ್ಷದ ಯುವಕನ ರೀತಿ ರಾಜ್ಯ ಸುತ್ತುತ್ತಿದ್ದಾರೆ. ಶ್ರೀಶೈಲಕ್ಕೂ ಶಿಕಾರಿಪುರದ ಶಿವಶರಣರಿಗೂ ಅವಿನಾಭಾವ ಸಂಭಂದ ಇದೆ. ಭೌಗೋಳಿಕವಾಗಿ ಶ್ರೀಶೈಲ ಆಂಧ್ರಪ್ರದೇಶದಲ್ಲಿ ಇದ್ದರೂ ಭಾವನಾತ್ಮಕವಾಗಿ ಕರ್ನಾಟಕದ ಜನರಿಗೆ ಅತ್ಯಂತ ನಿಕಟವಾಗಿದೆ. ಈ ಸಮುದಾಯ ಭವನದ ಸಂಕಲ್ಪ ಸ್ವಾಮಿಜಿ ಅವರದ್ದಾಗಿದ್ದರೂ ಅದನ್ನು ಪೂರ್ಣಗೊಳಿಸಿದ ಕೀರ್ತಿ ಯಡಿಯೂರಪ್ಪ ಅವರ ಮನೆತನಕ್ಕೆ ಸಲ್ಲಬೇಕಾಗುತ್ತದೆ’ ಎಂದು ಹೇಳಿದರು.
‘ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ₹ 6 ಕೋಟಿ ಅನುದಾನ ನೀಡಿದ್ದಾರೆ. ಈ ಭವನಕ್ಕೆ ಸರ್ಕಾರ ಆರ್ಥಿಕ ಸಹಕಾರ ನೀಡಿದ್ದರೂ ಹೆಚ್ಚುವರಿ ಹಣದ ಅವಶ್ಯಕತೆ ಬಿದ್ದಾಗ ಸ್ವತಃ ಸಂಸದ ಬಿ.ವೈ.ರಾಘವೇಂದ್ರ ಸ್ವಂತ ಹಣದಲ್ಲಿ ಕೆಲಸ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಇದೊಂದು ಪುಣ್ಯಭೂಮಿ, ಧರ್ಮಭೂಮಿ, ಕರ್ಮಭೂಮಿ. ಅನೇಕ ಶಿವಶರಣರು ಜನ್ಮತಾಳಿರುವ ಈ ನೆಲದಲ್ಲಿ ನಾವೆಲ್ಲ ಬುದುಕುತ್ತಿರುವುದೇ ಪುಣ್ಯ. ಕೆಲವೇ ವರ್ಷಗಳಲ್ಲಿ ಶಿಕಾರಿಪುರ ಈ ಪರಿ ಅಭಿವೃದ್ಧಿ ಆಗಲು ತಾಲ್ಲೂಕಿನ ಜನರ ಆಶೀರ್ವಾದ ಕಾರಣ. ಹಾಗಾಗಿಯೇ ವಿಜಯೇಂದ್ರ ಪಕ್ಷದಲ್ಲಿ ಉನ್ನತ ಹುದ್ದೆ ಪಡೆದು ಸಂಘಟನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಕಲ್ಯಾಣ ಕ್ರಾಂತಿಗೆ ಮತ್ತು ಶರಣ ಕ್ರಾಂತಿಗೆ ಮೂಲ ಕಾರಣ ಶಿಕಾರಿಪುರ ತಾಲ್ಲೂಕು. ಅಲ್ಲಮಪ್ರಭು, ಅಕ್ಕಮಹಾದೇವಿ ಮಲೆನಾಡಿಗೆ ಹೆಮ್ಮೆ. ಅವರ ಜನ್ಮಸ್ಥಳ ಇಡೀ ದೇಶ ನೋಡುವಂತೆ ಅಭಿವೃದ್ಧಿಯಾಗಿದೆ. ಬಳ್ಳಿಗಾವಿ ಸಹ ಅದೇ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿದೆ’ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಶ್ರೀಶೈಲ ಹಾಗೂ ಉಡುತಡಿಯ ಮಧ್ಯದ 12ನೇ ಶತಮಾನದ ಸಂಬಂಧವನ್ನು ಈಗ 21ನೇ ಶತಮಾನದಲ್ಲಿ ಮತ್ತೆ ಮೆಲಕು ಹಾಕುವ ಕೆಲಸವಾಗಿದೆ. ಶಿಕಾರಿಪುರದ ಮಣ್ಣಿನ ಶಕ್ತಿಯಿಂದಾಗಿ ಯಡಿಯೂರಪ್ಪ ಉನ್ನತ ಹುದ್ದೆ ಸ್ವೀಕರಿಸಿದ್ದಾರೆ. ಪಂಚಪೀಠಾಧ್ಯಕ್ಷರ ಆಶೀರ್ವಾದದಿಂದ ಈ ಭಾಗದಲ್ಲಿ ಒಂದು ಭವ್ಯ ಸಾಂಸ್ಕೃತಿಕ ಭವನ ನಿರ್ಮಾಣ ಆಗಿದೆ. ಅದಕ್ಕೆ ಕಾರಣರಾದ ಶ್ರೀಶೈಲ ಜಗದ್ಗುರುಗಳಿಗೆ ಅಭಿನಂದನೆ’ ಎಂದು ಹೇಳಿದರು.
ತೊಗರ್ಸಿ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ವಿರಕ್ತ ಮಠದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಜನ್ಮದಿನದ ನಿಮಿತ್ತ ಬಿ.ಎಸ್.ಯಡಿಯೂರಪ್ಪ ಅವರರನ್ನು ಹಾಗೂ ಅಮೃತ ಮಹೋತ್ಸವದ ನಿಮಿತ್ತ ತೊಗರ್ಸಿ ಮಳೆ ಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿಯನ್ನು ಗೌರವಿಸಲಾಯಿತು.
ಮಾಜಿ ಶಾಸಕ ಸುಭಾಷ್ ಕಲ್ಲೂರ್, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೆ.ರೇವಣಪ್ಪ, ವೀರಶೈವ ಸಮಾಜದ ಅಧ್ಯಕ್ಷ ಪ್ರಭು ಸ್ವಾಮಿ, ಟ್ರಸ್ಟ್ ನಿರ್ದೇಶಕ ಮುರುಘರಾಜ್, ತೊಗರ್ಸಿ ಚನ್ನವೀರದೇಶಿ ಕೇಂದ್ರ ಸ್ವಾಮೀಜಿ, ಕ್ಯಾಸನೂರು ಸ್ವಾಮೀಜಿ ಸೇರಿ ಜಿಲ್ಲೆಯ ಎಲ್ಲ ಮಠಾಧೀಶರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.