ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ: ಸರ್ಕಾರ ಜಮೀನು ಮಂಜೂರು ಮಾಡಿದರೂ ಸಾಗುವಳಿಗೆ ತಡೆ

Published 14 ಮೇ 2024, 15:14 IST
Last Updated 14 ಮೇ 2024, 15:14 IST
ಅಕ್ಷರ ಗಾತ್ರ

ಭದ್ರಾವತಿ: ‘ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ಡಿ.ಬಿ.ಹಳ್ಳಿ ಗ್ರಾಮದ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಮಾಡಲು ಅವಕಾಶ ನೀಡದೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ತಕ್ಷಣ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಸೋಮವಾರ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ರೈತರು ಆಗ್ರಹಿಸಿದರು.

ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ‘ಡಿ.ಬಿ. ಹಳ್ಳಿ ಗ್ರಾಮದ ರೈತರಿಗೆ ಯಡೇಹಳ್ಳಿ ಗ್ರಾಮದ ಸರ್ವೆ ನಂ. 66ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಒಟ್ಟು 34 ಜನರಿಗೆ 1961– 62ರಲ್ಲಿ ಪ್ರತಿಯೊಬ್ಬ ರೈತರಿಗೂ ತಲಾ 2 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದೆ. ಅವರು ಈ ಜಮೀನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಜಮೀನು ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಸರ್ಕಾರ ಮಂಜೂರು ಮಾಡಿದ ಜಮೀನಿನಲ್ಲಿ ಕೆಲವು ರೈತರು ಜಮೀನಿನ ಅಡಮಾನ ಸಾಲ ಪಡೆದಿದ್ದಾರೆ. ಅಲ್ಲದೇ ಕೆಲವರು ಇದೇ ಜಮೀನನ್ನು ಬೇರೆಯವರಿಗೆ ವಿಲ್ (ಮರಣ ಶಾಸನದ) ಮೂಲಕ ಖಾತೆ ಬದಲಾವಣೆ ಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಜಮೀನಿನ ಅಧಿಕಾರವನ್ನು ರೈತರಿಗೆ ನೀಡಿದ್ದಾರೆ. ಆದರೂ ಕಾನೂನನ್ನು ಬದಿಗೆ ತಳ್ಳಿ ಮಾವಿನಕಟ್ಟೆ, ಶಾಂತಿಸಾಗರ ವಲಯದ ಅರಣ್ಯಾಧಿಕಾರಿ ರಾಮಪ್ಪ ದೊಡ್ಡಮನಿ ಮತ್ತು ಸಿಬ್ಬಂದಿ ಮೇ 6ರಂದು ವಿನಾಕಾರಣ ಜಮೀನಿಗೆ ನುಗ್ಗಿ ಸಾಗುವಳಿ ಮಾಡದಂತೆ ತಡೆದು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲ ಆರಂಭವಾಗುತ್ತಿದ್ದು, ಸಾಗುವಳಿ ಮಾಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ರೈತರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವ ವಹಿಸಿದ್ದರು. ರೈತ ಪ್ರಮುಖರಾದ ಆರ್.ಸಂತೋಷ್, ಎಸ್.ಈರೇಶ್, ಸತೀಶ್, ಯಲ್ಲಪ್ಪ, ಬಿ.ರೇಣುಕಪ್ಪ, ನಾಗರಾಜ್, ಆರ್.ತಿಮ್ಮಪ್ಪ, ನಂಜುಂಡಪ್ಪ, ರುದ್ರೇಶಪ್ಪ, ರಂಗಪ್ಪ, ಜಿ.ಎಂ.ರುದ್ರೇಶ್, ಆರ್.ಎಂ.ರುದ್ರಪ್ಪ, ಹನುಮಂತಪ್ಪ, ರಾಜಪ್ಪ, ಸುನೀಲ, ಹರೀಶ್, ಸುಶೀಲಬಾಯಿ, ರತ್ನಮ್ಮ, ಮಂಜಮ್ಮ, ಈರಮ್ಮ, ಪವಿತ್ರ ಮತ್ತು ಸಂಗಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT