ಸೊರಬ: ಕಾಂಗ್ರೆಸ್ನ ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ಜನರಿಗೆ ಅಪನಂಬಿಕೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗಳ ವಿರುದ್ಧ ಜೆಡಿಎಸ್ ವತಿಯಿಂದ ಜನಜಾಗೃತಿ ಮೂಡಿಸಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು.
ಪಟ್ಟಣದ ಆಲೆಕಲ್ಲು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ತಾಲ್ಲೂಕು ಘಟಕದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅಭಿವೃದ್ಧಿ ಕಾರ್ಯಗಳನ್ನು ಮರೆತಿದೆ. ಪ್ರತಿ ತಿಂಗಳು ಮನೆಯೊಡತಿಗೆ ₹ 2 ಸಾವಿರ ಯೊಜನೆ ಅಡಿ ಹಲವು ಮಹಿಳೆಯರ ಖಾತೆಗೆ ಇನ್ನೂ ಹಣ ಸಂದಾಯವಾಗಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದು ದೂರಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಲು ಟಿಕೆಟ್ ಸಿಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಹಾಗೂ ಮುಖಂಡರು ಒತ್ತು ನೀಡಬೇಕು ಎಂದು ಸೂಚಿಸಿದರು.
ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಹೊಸ ಸಮಿತಿಗಳನ್ನು ರಚಿಸಲು ಮುಂದಾಗಿದ್ದು, ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲು ಎಲ್ಲರಿಗೂ ಉತ್ಸಾಹವಿರುತ್ತದೆ. ಆದರೆ, ತಾಲ್ಲೂಕು ಮುಖಂಡರು ಒಮ್ಮತದ ಹೆಸರು ಸೂಚಿಸಿದರೆ ಮೂರು ದಿನಗಳಲ್ಲಿ ಆಯ್ಕೆ ಮಾಡಿ ಹೆಸರು ಘೋಷಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ತಿಳಿಸಿದರು.
ಹಿರಿಯ ಮುಖಂಡರಾದ ಕೆ.ಅಜ್ಜಪ್ಪ, ಹುಚ್ಚಪ್ಪ ಚಿಮಣೂರು, ತುಳಜಪ್ಪ, ಸಿದ್ದಪ್ಪ, ವಾಜೀದ್, ತ್ಯಾಗರಾಜ್, ರಾಮಕೃಷ್ಣ, ಕುಮಾರ್, ದೀಪಕ್ ಸಿಂಗ್ ಗಣಪತಿ, ರಾಮಪ್ಪ ಕೊಡಕಣಿ, ವಿನಾಯಕ ಹೆಗಡೆ ಮುಟುಗುಪ್ಪೆ, ಬಸವನಗೌಡ, ಅಜೀಂ ಸಾಬ್, ಶ್ರೀಧರ್ ಶೇಟ್, ದಿಗಂಬರ ಇದ್ದರು.