ಶಿವಮೊಗ್ಗ: ಬಿಜೆಪಿ ಸರ್ಕಾರ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ರೈತರ ಮೇಲೆ ಕಿರುಕುಳ ನೀಡುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ತಿಳಿಸಿದರು.
ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಬಗರ್ಹುಕುಂ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಇವರೆಗೂ ಪರಿಹಾರ ಮಾಡಲು ಮುಂದಾಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಜಿಲ್ಲೆಯಲ್ಲಿ ರೈತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಸುಮಾರು ಮೂರು ಸಾವಿರ ರೈತರ ಮೇಲೆ ಇದುವರೆಗೂ ಕೇಸು ಹಾಕಲಾಗಿದೆ. ರೈತರ 80 ಸಾವಿರ ಅರ್ಜಿಗಳನ್ನು ಯಾವ ವಿಚಾರಣೆ ಮಾಡದೆ, ಪರಿಶೀಲನೆ ನಡೆಸದೇ ವಜಾ ಮಾಡಿದ್ದಾರೆ’ ಎಂದು ದೂರಿದರು.
ಬಿ.ಎಸ್.ಯಡಿಯೂರಪ್ಪನವರು ಒಮ್ಮೆ ಸದನದಲ್ಲಿ ಅರಣ್ಯಾಧಿಕಾರಿಗಳ ದೌರ್ಜನ್ಯ ವಿರೋಧಿಸಿದ್ದರು. ಬಗರ್ಹುಕುಂದಾರರಿಗೆ ರಕ್ಷಣೆ ನೀಡುವುದಾಗಿ ಹೇಳಿದ್ದರು. ಆದರೆ, ಅವರ ಹೇಳಿಕೆ ಸದನದಲ್ಲಿ ಹಾಗೂ ಕಡತದಲ್ಲಿಯೇ ಉಳಿದಿದೆ. ನೋಟಿಸ್ ಕೊಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಮಂತ್ರಿಗಳ ಮಾತು ಕೇಳದ ಸ್ಥಿತಿಯಲ್ಲಿ ಅಧಿಕಾರಿಗಳು ತಲುಪಿದ್ದಾರೆ ಎಂದರು.
ಭೂ ಕಬಳಿಕೆ ಕಾಯ್ದೆಗೆ ತಿದ್ದುಪಡಿ ತಂದರು ಕೂಡ ಅದು ಅನುಷ್ಠಾನಗೊಂಡಿಲ್ಲ. ಬೆಂಗಳೂರು ಬಿಟ್ಟು ಆಯಾ ಭಾಗದ ಸ್ಥಳೀಯ ನ್ಯಾಯಾಲಯಗಳಲ್ಲಿಯೇ ವಿಚಾರಣೆ ನಡೆಯಬೇಕು ಎಂಬ ಆದೇಶವಿದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಬಗರ್ಹುಕುಂದಾರರಿಗೆ ರಕ್ಷಣೆ ನೀಡಬೇಕು. ಅವರ ಬಹುಕಾಲದ ಬೇಡಿಕೆಯಾದ ಸಾಗುವಳಿ ದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.