ಸಾಗರ: ಕೆರೆಗೆ ಕಾಯಕಲ್ಪ ನೀಡುವ ಕೆಲಸ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಮಗಳಲ್ಲಿ ಈ ಮಾದರಿಯ ಕಾರ್ಯ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಿದೆ ಎಂದು ಮೂಲೆಗದ್ದೆ ಮಠದ ಅಭಿನವ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.
ಸಮೀಪದ ಓತಿಗೋಡು ಗ್ರಾಮದಲ್ಲಿ ನಡೆಯುತ್ತಿರುವ ಬ್ರಹ್ಮನ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದ ಅವರು, ಸರ್ಕಾರದ ಸಹಾಯವಿಲ್ಲದೆ ಗ್ರಾಮಸ್ಥರು ಸೇರಿ ದಾನಿಗಳ ನೆರವಿನಿಂದ ಕೆರೆಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಈ ಭಾಗದಲ್ಲಿ ಸ್ವಾನ್ ಎಂಡ್ ಮ್ಯಾನ್, ಸಾರಾ ಸಂಸ್ಥೆಯು ಹಲವು ಕೆರೆಗಳ ಕಾಯಕಲ್ಪಕ್ಕೆ ಅಗತ್ಯ ಕ್ರಮ ಕೈಗೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಿಸ್ವಾರ್ಥ ಮನೋಭಾವದಿಂದ ಈ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ದಾನಿಗಳ ಸಹಕಾರ ಕೂಡ ಸಕಾರಾತ್ಮಕವಾಗಿದೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಂಗ ಕಲಾವಿದ ಯೇಸು ಪ್ರಕಾಶ್ ಅಕಾಲಿಕವಾಗಿ ನಮ್ಮನ್ನು ಅಗಲಿರುವುದು ದುಃಖದ ಸಂಗತಿ ಎಂದರು.
ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಅಖಿಲೇಶ್ ಚಿಪ್ಪಳಿ ಕಾಮಗಾರಿ ನಡೆಯುತ್ತಿರುವ ಕುರಿತ ವಿವರಗಳನ್ನು ನೀಡಿದರು. ಪ್ರಮುಖರಾದ ಎಲ್.ವಿ ಅಕ್ಷರ, ಉಮಾಪತಿ, ಕಾಂತರಾಜ್, ನಟರಾಜ, ಮಂಜುನಾಥ, ಅಶೋಕ್ ಇದ್ದರು.