ಸಿಗಂದೂರು (ತುಮರಿ): ‘ಕಲಾ ಪೋಷಕರ, ಕಲಾವಿದರ ಹಾಗೂ ಭಕ್ತರ ಸಹಕಾರದಿಂದ ಶ್ರೀ ಕ್ಷೇತ್ರ ಸಿಗಂದೂರು – ಯಕ್ಷಗಾನ ಮೇಳವು 21ನೇ ವರ್ಷದ ತಿರುಗಾಟವನ್ನು ಯಶಸ್ವಿಯಾಗಿ ಮುಗಿಸಿದ್ದು, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ’ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಎಚ್.ಆರ್ ಹೇಳಿದರು.
ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಸಿಗಂದೂರು ಕ್ಷೇತ್ರವು ಯಕ್ಷಗಾನ ಕಲೆಯ ಉಳಿವಿಗೆ ಬದ್ಧವಾಗಿದ್ದು, ತಿರುಗಾಟ ರೂಪಿಸಿದೆ. ಕಲಾ ಪೋಷಕರು, ಹರಕೆ ಸೇವೆ ನೋಂದಾಯಿಸುವ ಭಕ್ತರ ಸಹಕಾರವಿದ್ದರೆ ಮಾತ್ರ ಮೇಳವನ್ನು ನಿರಂತರವಾಗಿ ಮುನ್ನಡೆಸಲು ಸಾಧ್ಯ’ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಯಕ್ಷಗಾನ ಮೇಳಗಳು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದವು. ನಂತರ ಸಿಗಂದೂರು ಮೇಳ ಎಲ್ಲರ ಸಹಕಾರದಿಂದ ಯಶಸ್ವಿ ಪ್ರದರ್ಶನ ನಡೆಸುವಂತಾಗಿದೆ. ಮುಂದಿನ ದಿನಗಳಲ್ಲಿ ಮೇಳಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಮುಖ್ಯ ಮೃದಂಗ ವಾದಕ ಸೀತಾರಾಮ ಬಂಡಾರಿ, ಮೇಳದ ಯಕ್ಷಸಾರಥಿ ರವಿರಾಜ್ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಮೇಳದ ವ್ಯವಸ್ಥಾಪಕ ಮೋಹನ್ ಕುಮಾರ ಹೆರಬೆಟ್ಟು ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ್, ಸಂದೀಪ ಸಿಗಂದೂರು ಮೇಳದ ಕಲಾವಿದರು ‘ಕಾಳಿದಾಸ’, ‘ಕನಕಾಂಗಿ ಕಲ್ಯಾಣಿ ಪ್ರಸಂಗ’ ಪ್ರದರ್ಶಿಸಿದರು.