ಭದ್ರಾವತಿ: ಕೋವಿಡ್–19 ಭಾಗವಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದ ವಿಐಎಸ್ಎಲ್ ಕಾರ್ಖಾನೆ ಸೋಮವಾರ ರೋಸ್ಟರ್ ವ್ಯವಸ್ಥೆ ಪಾಲನೆಗೆ ಮುಂದಾಗಿದೆ.
ಸದ್ಯ ಅವಶ್ಯಕ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿನ ಕೆಲಸವನ್ನು ದಿನಬಿಟ್ಟು ದಿನ ಕೊಡುವ ನಿರ್ಧಾರಕ್ಕೆ ಆಡಳಿತ ಮಂಡಳಿ ಬಂದಿರುವುದು ಸಮಾಧಾನಕರ ಬೆಳವಣಿಗೆ ಎಂದು ಕಾರ್ಮಿಕ ಸಂಘದ ಬಸಂತಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಲ್ಲರೂ ಒಟ್ಟಾಗಿ ಎರಡು ಪಾಳಿಗಳಲ್ಲಿ ಕೆಲಸ ಮಾಡುವ ಬದಲು ದಿನಬಿಟ್ಟು ದಿನ ಮಾಡಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಸ್ವಲ್ಪಮಟ್ಟಿನ ಸಾಮಾಜಿಕ ಅಂತರದ ಪಾಲನೆ ಸಾಧ್ಯವಾದಂತಾಗಿದೆ ಎಂದರು.
ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘದ ಜತೆ ಭಾನುವಾರ ನಡೆದ ಮಾತುಕತೆ ಫಲವಾಗಿ ಈ ರೀತಿಯ ವ್ಯವಸ್ಥೆಗೆ ಪರಸ್ಪರ ಒಪ್ಪಿಕೊಂಡು ನಿರ್ಧರಿಸಲಾಗಿದೆ. ಮುಂದೆ ಸರ್ಕಾರದ ಆದೇಶ ಬಂದಲ್ಲಿ ಅದನ್ನು ಚಾಚೂ ತಪ್ಪದೆ ಪಾಲಿಸಲು ಆಡಳಿತ ಮಂಡಳಿ ಒಪ್ಪಿದೆ ಎಂದು ಗುತ್ತಿಗೆ ಕಾರ್ಮಿಕ ಸಂಘದ ಸುರೇಶ್ ಹೇಳಿದರು.
ಕಾರ್ಮಿಕರು ಒಳ ಪ್ರವೇಶ ಮಾಡುವಾಗ ಥರ್ಮೋ ಟೆಸ್ಟಿಂಗ್ ನಡೆದಿದ್ದು, ಪ್ರತಿ ಇಲಾಖೆಯಲ್ಲೂ ಸ್ಯಾನಿಟೈಸೇಷನ್ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ದೃಷ್ಟಿಯಿಂದ ಹಲವು ಕ್ರಮ ತೆಗದುಕೊಳ್ಳಲಾಗಿದೆ ಎಂದರು.