ಶಿವಮೊಗ್ಗ: ಸೂಡಾದಿಂದ 10 ಸಾವಿರ ನಿವೇಶನ ಹಂಚುವುದಾಗಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದ್ದಾರೆ. ಆದರೆ, ಇದಕ್ಕೆ ಜಮೀನು ಎಲ್ಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾಯದರ್ಶಿ ನಜೀರ್ ಅಹಮ್ಮದ್ ಪ್ರಶ್ನಿಸಿದರು.
10 ಸಾವಿರ ನಿವೇಶನ ಹಂಚಲು 200 ಎಕರೆ ಭೂಮಿ ಬೇಕು. ಅಷ್ಟು ಜಮೀನು ಜಿಲ್ಲೆಯಲ್ಲಿ ಎಲ್ಲಿದೆ? ಈಗ ಎಷ್ಟು ಎಕರೆ ಇಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಇದನ್ನು ಮೊದಲು ಬಹಿರಂಗಪಡಿಸಲಿ. ಬಳಿಕ ಆಶ್ವಾಸನೆ ನೀಡಲಿ ಎಂದರು.
ನಗರದ ಮಧ್ಯ ಭಾಗ ಮತ್ತು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ರೆವಿನ್ಯೂ ಬಡಾವಣೆಗಳನ್ನು ಕೆಲವು ಡೆವಲಪರ್ ಗಳು ನಿರ್ಮಿಸುತ್ತಿದ್ದಾರೆ. ಇದೊಂದು ದೊಡ್ಡ ಭೂ ಮಾಫಿಯಾ ಆಗಿದೆ. ಸರ್ಕಾರಿ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ಹಣ ನಷ್ಟವಾಗುತ್ತಿದೆ. ಕಾನೂನುಗಳನ್ನೇ ಉಲ್ಲಂಘನೆ ಮಾಡುತ್ತಿದ್ದಾರೆ. ಹಗಲು ದರೋಡೆ ನಡೆಯುತ್ತಿದೆ. ಪ್ರಾಧಿಕಾರದ ನೂತನ ಅಧ್ಯಕ್ಷರು ಇದನ್ನು ತಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್, ಲಿಂಗರಾಜ್, ಸಗೀರ್ ಅಹಮ್ಮದ್, ಕಲೀಂ, ಏಜಾಜ್ ಪಾಶ, ಯಾಸೂಫ್ ಇದ್ದರು.