ಶಿವಮೊಗ್ಗ: ಟಿಪ್ಪು ಮತಾಂಧ. ಅನೇಕ ಹಿಂದೂಗಳ ಜೀವ, ಮಾನ, ಆಸ್ತಿಗಳ ಜತೆ ಆಟವಾಡಿದ್ದಾರೆ. ಅಂಥವರ ಜಯಂತಿ ಆಚರಣೆ ಬೇಡ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಮುಖಂಡ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದರು.
ಗೋಪಿ ವೃತ್ತದಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಟಿಪ್ಪುವಿನಿಂದ ಜೀವ ಹಾನಿಗೊಳಗಾದ ಕುಟುಂಬದ ಹಿರಿಯರನ್ನು ಕಳೆದುಕೊಂಡು ಈಗಲೂ ನೋವಿನಲ್ಲಿದ್ದಾರೆ. ಅಂಥವರ ಜಯಂತಿ ಆಚರಣೆ ಬದಲು ದೇಶಕ್ಕಾಗಿ ಪ್ರಾಣ ತ್ಯಜಿಸಿದ ಮಹಾತ್ಮರ ಜಯಂತಿ ಆಚರಿಸಲಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಿಸಿದಂತಹ ಹಲವು ಮುಸ್ಲಿಂ ಮಹನೀಯರಿದ್ದಾರೆ ಎಂದರು.
ಸಮಿತಿಯ ಪ್ರಮುಖರಾದ ದೀನದಯಾಳು, ರಮೇಶ್ ಬಾಬು, ಕೆ.ಇ.ಕಾಂತೇಶ್, ವೀರಭದ್ರಪ್ಪ ಪೂಜಾರ್, ಭಾನುಪ್ರಕಾಶ್, ಕೆ.ಜಿ. ಕುಮಾರಸ್ವಾಮಿ, ಮಾಲತೇಶ್, ಸುರೇಖಾ ಮುರಳಿಧರ್, ಋಷಿಕೇಶ್ ಪೈ ಇದ್ದರು.
ಬಿಗಿ ಬಂದೋಬಸ್ತ್: ಟಿಪ್ಪು ಜಯಂತಿ ಅಂಗವಾಗಿ ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿಎಆರ್ ಸಿಬ್ಬಂದಿ, ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಜೆ ಪಥ ಸಂಚಲನ ನಡೆಸಿದರು.