ಬೆಂಗಳೂರು: ‘ಇಷ್ಟು ದಿವಸ ಎಲ್ಲಿ ಮಲಗಿದ್ದೆ’ ಎಂದು ರೈತ ಮಹಿಳೆಯನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಾಖಲಿಸಿದ್ದ ದೂರನ್ನು ರಾಜ್ಯ ಮಾನವ ಹಕ್ಕು ಆಯೋಗ (ಎಸ್ಎಚ್ಆರ್ಸಿ) ವಜಾಗೊಳಿಸಿದೆ.
ಎಸ್ಎಚ್ಆರ್ಸಿ ಅಧ್ಯಕ್ಷ ಡಿ.ಎಚ್. ವಘೇಲ ನ.30ರಂದು ನೀಡಿರುವ ಆದೇಶದಲ್ಲಿ, ಮುಖ್ಯಮಂತ್ರಿ ವಿರುದ್ಧ ಮಹಿಳೆಯಾಗಲೀ ಅಥವಾ ಬೇರೆಯವರಾಗಲೀ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸದಿರುವುದರಿಂದ ಅರ್ಜಿ ವಜಾ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಮಹಿಳೆಯನ್ನು ಅವಮಾನಿಸುವಂಥ ಪದಗಳನ್ನು ಪ್ರಯೋಗ ಮಾಡಿದ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಇ– ಮೇಲ್ನಲ್ಲಿ ಎಸ್ಎಚ್ಆರ್ಸಿಗೆ ದೂರು ಸಲ್ಲಿಸಲಾಗಿತ್ತು.
ಕಬ್ಬಿನ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನವೆಂಬರ್ 19ರಂದು ಬೆಳಗಾವಿಯ ಸುವರ್ಣಸೌಧಕ್ಕೆ ರೈತರು ಮುತ್ತಿಗೆ ಹಾಕಿದ ಸಮಯದಲ್ಲಿ ಕುಮಾರಸ್ವಾಮಿ ಮಹಿಳೆಯ ವಿರುದ್ಧ ಗುಡುಗಿದ್ದರು. ಅವರ ಈ ಹೇಳಿಕೆ ತೀವ್ರ ಟೀಕೆಗೆ ಒಳಗಾಗಿತ್ತು.