ಹೂವಿನಹಡಗಲಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿಲ್ಲ. ಯಾವ ಸಮಸ್ಯೆಗೂ ಆರೋಗ್ಯಾಧಿಕಾರಿ ಸ್ಪಂದಿಸುತ್ತಿಲ್ಲ. ಕರೆಯನ್ನೂ ಸ್ವೀಕರಿಸು ತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಡಿ.ಚಂದ್ರಶೇಖರನಾಯ್ಕ ದೂರಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಹೊಸಪೇಟೆಯ ಲೋಕಾಯುಕ್ತರು ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು–ಕೊರತೆ ಆಲಿಕೆ ಸಭೆಯಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ ಅವರು, ಹಡಗಲಿಯಲ್ಲಿ 3,864 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದರೂ ನಿಯಮಾನುಸಾರ ಪ್ರತ್ಯೇಕ ಪ್ರಯೋಗಾಲಯ ಸಿಬ್ಬಂದಿ ನೇಮಿಸಿಲ್ಲ. ₹10ರ ಟಿ.ಟಿ. ಲಸಿಕೆ ತರಲು ವೈದ್ಯರು ಹೊರಗಡೆ ಚೀಟಿ ಬರೆಯುತ್ತಾರೆ. ಜನೌಷಧಿ ಕೇಂದ್ರದಲ್ಲಿ ಸರಿಯಾಗಿ ಔಷಧಿ ಸಿಗುತ್ತಿಲ್ಲ. ವಾರ್ಡ್ಗಳಲ್ಲಿ ಹಾಸಿಗೆ, ದಿಂಬುಗಳಿಲ್ಲದೇ ರೋಗಿಗಳು ತಲೆಯ ಕೆಳಗೆ ಚಪ್ಪಲಿ ಇಟ್ಟುಕೊಂಡು ಮಲಗುತ್ತಾರೆ ಎಂದು ಅವರು ದೂರುಗಳ ಮಳೆಗರೆದರು.
ಇದಕ್ಕೆ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ಪ್ರತಿಕ್ರಿಯಿಸಿ, ಜನೌಷಧಿ ಕೇಂದ್ರಕ್ಕೆ ಬೇಡಿಕೆಗೆ ತಕ್ಕಷ್ಟು ಔಷಧಗಳ ಪೂರೈಕೆಯಾಗುತ್ತಿಲ್ಲ. ಅಗತ್ಯ ಇರುವ ಔಷಧಗಳ ಪಟ್ಟಿ ಮಾಡಿ ಕೊಟ್ಟಿದ್ದು, ಬರುವ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಆಸ್ಪತ್ರೆಯಲ್ಲಿ ಹಾಸಿಗೆ, ದಿಂಬಿನ ಸಮಸ್ಯೆ ಇಲ್ಲ ಎಂದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ವಸಂತಕುಮಾರ್ ಅಸೋದೆ ಮಾತ ನಾಡಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಜನರಿಗೆ ತಪ್ಪು ಮಾಹಿತಿ ನೀಡುವುದು, ಅಲೆದಾಡಿಸುವುದು ಸರಿಯಲ್ಲ. ದೂರು ನೀಡಿದ ಅರ್ಜಿದಾರರಿಗೆ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
‘ಒಂಬತ್ತು ತಿಂಗಳಿಂದ ಸಂಬಂಧಿ ಯೊಬ್ಬರ ವೃದ್ಧಾಪ್ಯ ವೇತನ ಬರುತ್ತಿಲ್ಲ. ಎರಡು ತಿಂಗಳಿಂದ ಬೇರೆಯವರ ಖಾತೆಗೆ ಹಣ ಜಮೆ ಆಗುತ್ತಿರುವ ಕುರಿತು ದೂರು ನೀಡಿದರೂ ಅಧಿಕಾರಿಗಳಿಂದ ಸ್ಪಂದನೆ ಇಲ್ಲ’ ಎಂದು ಇರ್ಫಾನ್ ಗಮನಕ್ಕೆ ತಂದರು. ಪಿಂಚಣಿ ನಿರ್ದೇಶನಾಲಯ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವುದಾಗಿ ತಹಶೀಲ್ದಾರ್ ತಿಳಿಸಿದರು.
ಪಟ್ಟಣದ ಎಸ್.ಪಿ.ವಿ. ಶಾಲೆ ಆವರಣಕ್ಕೆ ರಕ್ಷಣೆ ಇಲ್ಲ. ಅದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. 10ನೇ ವಾರ್ಡಿನ ಸಮಾಜ ಕಲ್ಯಾಣ ಇಲಾಖೆ ಕಚೇರಿ ರಸ್ತೆಯಲ್ಲಿ ಸಂಜೆ ಹೊತ್ತು ಪುಂಡರ ಹಾವಳಿ ಹೆಚ್ಚಾಗಿದೆ. ಬೀದಿದೀಪಗಳನ್ನು ಒಡೆದು ಹಾಕುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಯುವಕನೊಬ್ಬರ ಒತ್ತಾಯಿಸಿದರು.
ಜಮೀನಿನ ದಾಖಲೆ ತಿದ್ದುಪಡಿ ಗಾಗಿ ಆರು ವರ್ಷಗಳಿಂದ ಅಲೆದಾಡಿ ಸುತ್ತಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಯ ತಪ್ಪಿನಿಂದ ನಾವು ತೊಂದರೆ ಅನುಭವಿಸಬೇಕಾಗಿದೆ. ವಿದ್ಯಾವಂತರಿಗೆ ಈ ರೀತಿ ತೊಂದರೆಯಾದರೆ ಅನಕ್ಷರಸ್ಥರ ಪಾಡೇನು ಎಂದು ಚಂದ್ರು ಕೊಂಚಿಗೇರಿ ಎಂಬವರು ಪ್ರಶ್ನಿಸಿದರು.
‘ದೇವಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಅಕ್ರಮಕ್ಕೆ ಸಂಬಂ ಧಿಸಿದಂತೆ ನಿರ್ದಿಷ್ಟ ಹೆಸರು ಸೂಚಿ ಸದೇ ಕ್ರಮ ಜರುಗಿಸಿ ಎಂದು ಮೇಲಧಿ ಕಾರಿಗಳು ಆದೇಶಿಸಿದ್ದಾರೆ. ತಪ್ಪಿತಸ್ಥರ ಹೆಸರುಗಳನ್ನು ಉಲ್ಲೇಖಿಸಲು ಕೋರಿ ಮತ್ತೆ ಪತ್ರ ಬರೆದಿದ್ದೇವೆ. ಆದಾಗ್ಯೂ ದೂರುದಾರರು ಸಾಮಾಜಿಕ ಜಾಲತಾಣದಲ್ಲಿ ಚಾರಿತ್ರ್ಯಹರಣ ಮಾಡುತ್ತಿದ್ದಾರೆ. ಇದು ಪುನರಾವರ್ತನೆಯಾದಲ್ಲಿ ಅವರ ವಿರುದ್ಧವೂ ದೂರು ದಾಖಲಿಸಬೇಕಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಯು.ಎಚ್.ಸೋಮಶೇಖರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.