ವೈ.ಎನ್.ಹೊಸಕೋಟೆ: ಹೋಬಳಿಯ ದೊಡ್ಡಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ವೈದ್ಯರಿಗಾಗಿ ಶನಿವಾರ ಬೆಳಿಗ್ಗೆ ಅನಾರೋಗ್ಯ ಪೀಡಿತ ವೃದ್ಧೆ ಹಲವು ಗಂಟೆ ಕಾದು ಕುಳಿತಿದ್ದು, ವೈದ್ಯರು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಮೂರು ದಿನಗಳಿಂದ ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ನಿನ್ನೆ ಚುನಾವಣೆ ಇದ್ದ ಕಾರಣ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದೇನೆ. ಆದರೆ ಯಾರೊಬ್ಬರೂ ಆಸ್ಪತ್ರೆಗೆ ಬಂದಿಲ್ಲ. ನಿತ್ರಾಣಗೊಂಡಿರುವ ನಾನು ಬೇರೆಡೆ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ ವೃದ್ಧೆ ಆಸ್ಪತ್ರೆ ಬಾಗಿಲ ಮುಂದೆ ಮಲಗಿದ್ದರು.
ಸರ್ಕಾರಿ ರಜಾ ದಿನಗಳು ಹಾಗೂ 2ನೇ ಮತ್ತು 4ನೇ ಶನಿವಾರ ಆಸ್ಪತ್ರೆ ಕಾರ್ಯನಿರ್ವಹಿಸುವುದಿಲ್ಲ ಎಂಬ ವಿಷಯ ತಿಳಿಯದೆ ವೃದ್ಧೆ ಆಸ್ಪತ್ರೆಗೆ ಬಂದಿದ್ದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಸರಿಯಾಗಿ ಆಸ್ಪತ್ರೆಗೆ ಹಾಜರಾಗುತ್ತಿಲ್ಲ. ಇಲ್ಲಿನ ‘ಡಿ’ ದರ್ಜೆ ನೌಕರನೂ ಸರಿಯಾಗಿ ಆಸ್ಪತ್ರೆಗೆ ಹಾಜರಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.