ತುಮಕೂರು: ತಾಲ್ಲೂಕಿನ ಬಿದರೆಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ನಲ್ಲಿ ಜೀವವೈವಿಧ್ಯ ಅಭಯಾರಣ್ಯ ಸ್ಥಾಪಿಸುವ ಒಪ್ಪಂದಕ್ಕೆ ವಿಪ್ರೋ ಸಂಸ್ಥೆಯ ಟ್ರಸ್ಟಿ ಪಿ.ಎಸ್.ನಾರಾಯಣ್ ಹಾಗೂ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಶುಕ್ರವಾರ ಸಹಿ ಹಾಕಿದರು.
ಇದು ಅಂದಾಜು 15 ಎಕರೆ ವಿಸ್ತೀರ್ಣದ ಯೋಜನೆಯಾಗಿದ್ದು, ಸ್ಥಳೀಯ ಸಸ್ಯ ಪ್ರಭೇದ ಸಂರಕ್ಷಿಸಲು ಮುಂದಾಗಿದೆ. ದೀರ್ಘಾವಧಿಯ ಜೀವವೈವಿಧ್ಯ ಉದ್ಯಾನದ ಸ್ಥಾಪನೆ ಮತ್ತು ನಿರ್ವಹಣೆಗೆ ವಿಪ್ರೋ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಸಿದ್ಧರಬೆಟ್ಟ, ದೇವರಾಯನದುರ್ಗ, ಮಧುಗಿರಿ ಮತ್ತು ತಿಮ್ಮಲಾಪುರದ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಸಸ್ಯಗಳು ಮೂರರಿಂದ ಐದು ವರ್ಷಗಳಲ್ಲಿ ಉದ್ಯಾನದಲ್ಲಿ ಸೂಕ್ಷ್ಮ ಪೋಷಣೆಗೆ ಒಳಗಾಗುತ್ತವೆ.
ವಿಪ್ರೋ ಸಂಸ್ಥೆಯ ಉಪಾಧ್ಯಕ್ಷ ವಿಶ್ವನಾಥ್ ಕಾರ್ಕಡ, ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಸಿ.ಪ್ರವೀಣ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಸ್.ಹನುಮಂತರಾಯಪ್ಪ, ಸಂರಕ್ಷಣಾವಾದಿ ಎನ್.ಸಿಗಮಣಿ, ವಿ.ವಿ ಕೌಶಲಾಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ.ಕೆ.ಜಿ.ಪರಶುರಾಮ ಇತರರು ಹಾಜರಿದ್ದರು.