ತುಮಕೂರು: ‘ಜಿಲ್ಲೆಯ ಧ್ವನಿಯಾಗಿ, ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ನಡೆಸುತ್ತೇನೆ. ಜಿಲ್ಲೆ, ರಾಜ್ಯ, ರಾಷ್ಟ್ರದ ವಿಚಾರಗಳನ್ನು ಸಂಸತ್ನಲ್ಲಿ ಚರ್ಚೆ ಮಾಡುತ್ತೇನೆ’ ಎಂದು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಇಲ್ಲಿ ಸೋಮವಾರ ಹೇಳಿದರು.
‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ) ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ‘ಮೇಕೆದಾಟು ವಿಚಾರದ ಬಗ್ಗೆಯೂ ಎರಡು ಬಾರಿ ಸಂಸತ್ತಿನಲ್ಲಿ ಚರ್ಚೆ ಮಾಡಿದ್ದೇನೆ. ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದೆ. ಮುಂದಿನ ದಿನಗಳಲ್ಲೂ ಇದೇ ವಿಚಾರ ಪ್ರಸ್ತಾಪಿಸುತ್ತೇನೆ. ರೈತರ ಆತ್ಮಹತ್ಯೆ, ಕೊಬ್ಬರಿ ಬೆಲೆ ಕುಸಿದ ಬಗ್ಗೆಯೂ ಪ್ರಶ್ನಿಸುತ್ತೇನೆ’ ಎಂದು ತಿಳಿಸಿದರು.
ಎಎಪಿ ಹೋರಾಟದ ಫಲವಾಗಿ ರೂಪುಗೊಂಡ ಪಕ್ಷ. ಪ್ರಬುದ್ಧರು ಹೆಚ್ಚಿರುವ ನವದೆಹಲಿಯಲ್ಲಿ ಪಕ್ಷ ಅಧಿಕಾರ ನಡೆಸುತ್ತಿದೆ. ಜನರು ಎಎಪಿ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಅನೇಕ ಪಕ್ಷಗಳು ಹೋರಾಟದಿಂದಲೇ ಪ್ರಾರಂಭವಾದವು. ನಂತರ ಬೃಹತ್ ಪಕ್ಷಗಳಾಗಿ ಹೊರಹೊಮ್ಮಿದವು ಎಂದರು.
‘ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈಗಾಗಲೇ ಒಂದು ಬಾರಿ ಲೋಕಸಭೆಯಲ್ಲಿ ಕೆಲಸ ಮಾಡಿದ್ದೇನೆ. ಜಿಲ್ಲೆಯ ಧ್ವನಿಯಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ’ ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ಅಮ್ಮಸಂದ್ರ ಪ್ರೇಮ್ಕುಮಾರ್, ‘ಪ್ರಧಾನಿ ನರೇಂದ್ರ ಮೋದಿ ₹155 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲದ ಹಣ ಯಾವುದಕ್ಕೆ ಬಳಸಿದ್ದಾರೆ. ಇದರಿಂದ ಯಾರಿಗೆ ಲಾಭವಾಗಿದೆ ಎಂಬುವುದು ಯಾರಿಗೂ ಗೊತ್ತಿಲ್ಲ. ಉದ್ಯೋಗ ಸೃಷ್ಟಿಯಾಗಿಲ್ಲ. ಮುಗ್ಧ ಜನರ ಭಾವನೆ ಕೆರಳಿಸಿ ಆಟವಾಡುತ್ತಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಈಗ ಸಮಯ ಬಂದಿದೆ. ಮುಂದಿನ ಚುನಾವಣೆಯಲ್ಲಿ ಮುದ್ದಹನುಮೇಗೌಡ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಕೇಳಿಕೊಂಡರು.
ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮಯ್ಯ, ‘ನಾವು ಶಕ್ತಿ ಮೀರಿ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಬೇಕು. ರಾಜ್ಯದ ಪರ ಧ್ವನಿ ಎತ್ತುತ್ತಾರೆ. ಹೆಚ್ಚಿನ ಅನುಭವ ಇದೆ. ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು’ ಎಂದರು.
ಮುಖಂಡರಾದ ರಾಮಾಂಜಿನಪ್ಪ, ಡಾ.ವಿಶ್ವನಾಥ್, ಮಂಜುನಾಥ್, ರಾಮಾಂಜಿನಿ, ಗೌಸ್ಪೀರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.