ತುಮಕೂರು: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸಾರಿಗೆ ನಿಗಮದ ಎದುರು ಗುರುವಾರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಎಸ್ಆರ್ಟಿಸಿಯಲ್ಲಿ ಅಗತ್ಯ ಸಿಬ್ಬಂದಿ, ಸರಿಯಾದ ವಾಹನಗಳು ಇಲ್ಲ. ಇದರಿಂದಾಗಿ ಈಗ ದುಡಿಯುತ್ತಿರುವ ಕಾರ್ಮಿಕರಿಗೆ ಒತ್ತಡ ಹೆಚ್ಚಾಗಿದೆ. ಸಾರಿಗೆ ಇಲಾಖೆಯಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.
ಸಾರಿಗೆ ಸಂಸ್ಥೆಯ ಮೂಲ ಉದ್ದೇಶ ಮರೆತು ಖಾಸಗಿಯವರಿಗೆ ನೀಡುವುದು ಸಾರಿಗೆ ಸಂಸ್ಥೆಯ ಕೆಲಸವಲ್ಲ. ಗುತ್ತಿಗೆ, ಹೊರ ಗುತ್ತಿಗೆಯಡಿ ದುಡಿಸಿ ಕೊಳ್ಳುವುದನ್ನು ಕೈಬಿಡಬೇಕು. ಸುಮಾರು 38 ತಿಂಗಳುಗಳಿಂದ ಬಾಕಿ ಇರುವ ವೇತನ ಕೂಡಲೇ ಪಾವತಿಸಬೇಕು. ಸಾರಿಗೆ ನಿಗಮಗಳ ನೌಕರರಿಗೆ ಹೊಸ ವೇತನ ಒಪ್ಪಂದ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಗಿರೀಶ್, ‘ಸಾರಿಗೆ ನೌಕರರು ವೇತನ ಹೆಚ್ಚಳ, ಬಡ್ತಿಗೆ ಮಾತ್ರ ಸೀಮಿತವಾಗದೆ ಅನ್ಯಾಯ ನಡೆದಾಗ ಪ್ರಶ್ನಿಸಬೇಕು. ಪ್ರಸ್ತುತ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಸಾರಿಗೆ ನೌಕರರಿಗೆ ಬರುವ ದಿನಗಳು ದೂರವಿಲ್ಲ. ನೌಕರರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು’ ಎಂದರು.
ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್ ಎಐಟಿಯುಸಿ ಅಧ್ಯಕ್ಷ ಹತ್ರಶ್ಪಾಷ, ಚಂದ್ರೇಗೌಡ, ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ನ ಸಿಐಟಿಯುನ ದೇವರಾಜು, ಶಮೀಉಲ್ಲಾ, ರಾಜಣ್ಣ, ಬಸವರಾಜು, ಕೆ.ಎಲ್.ಮಂಜುನಾಥ್ ಇತರರು ಹಾಜರಿದ್ದರು.