ಮಧುಗಿರಿ: ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ ತಿಳಿಸಿದರು.
ತಾಲ್ಲೂಕಿನ ವಡೇರಹಳ್ಳಿ, ಬಣವೇನಹಳ್ಳಿ, ಜಡೆಗೊಂಡನಹಳ್ಳಿ, ಹೊಸಕೆರೆ, ಮಿಡಿಗೇಶಿ, ಖ್ಯಾತಗೊಂಡನಹಳ್ಳಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.
ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾದರೆ ತಕ್ಷಣ ಕೊಳವೆಬಾವಿ ಕೊರೆಸುವುದು ಮತ್ತು ಖಾಸಗಿ ಕೊಳವೆ ಬಾವಿಯಿಂದ ಬಾಡಿಗೆ ಆಧಾರದ ಮೇಲೆ ನೀರು ಪಡೆದು ವಿತರಿಸಬೇಕು ಎಂದು ತಿಳಿಸಿದರು.
ಮಿಡಿಗೇಶಿ ಕೆರೆಯಲ್ಲಿ ಕೊರದಿರುವ ಕೊಳವೆ ಬಾವಿಗೆ ತಕ್ಷಣ ಪಂಪ್ ಮೋಟಾರು ಅಳವಡಿಸಬೇಕು. ಪೈಪ್ಲೈನ್ ಮಾಡಿಸಿ ಜನರಿಗೆ ನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಮೇವಿನ ಕಿಟ್ ವಿತರಸಲಾಗಿದ್ದು, ಸದ್ಯ 16 ವಾರಕ್ಕೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾ.ಪಂ. ಇಒ ಲಕ್ಷ್ಮಣ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ದನಗೌಡ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಲೋಕೇಶಪ್ಪ, ಮಿಡಿಗೇಶಿ ಗ್ರಾ.ಪಂ.ಪಿಡಿಒ ರಂಗನಾಥ್ ಪಾಲ್ಗೊಂಡಿದ್ದರು.