ಶಿರಾ: ‘ಬೆಂಗಳೂರಿನಲ್ಲಿ ಡಿಸೆಂಬರ್ 10ರಂದು ನಡೆಯುವ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಬೃಹತ್ ಜಾಗೃತಿ ಸಮಾವೇಶವನ್ನು ಯಶಸ್ವಿಗೊಳಿಸುವ ಮೂಲಕ ಸಮಾಜದ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಬೇಕು’ ಎಂದು ಸೋಲೂರಿನ ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಠದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಈಡಿಗ ಸಮುದಾಯದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಸಮ್ಮೇಳನದಲ್ಲಿ ಈಡಿಗ ಸಮಾಜದ ಎಲ್ಲ 26 ಪಂಗಡಗಳ ಜನರು ಭಾಗವಹಿಸಲಿದ್ದು, ಕರುಳ ಬಳ್ಳಿಗಳು ಒಂದೇ ಕಡೆ ಸೇರುವುದರಿಂದ ಎಲ್ಲರನ್ನು ನೋಡುವ ಸೌಭಾಗ್ಯ ದೊರೆಯಲಿದೆ ಎಂದರು.
ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ‘ರಾಜ್ಯದಲ್ಲಿ ಈಡಿಗ ಸಮುದಾಯದ 40 ಲಕ್ಷ ಜನಸಂಖ್ಯೆ ಇದೆ. ಸಂಘಟನೆಯ ಕೊರತೆಯಿಂದಾಗಿ ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅದ್ದರಿಂದ ನಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗಿಟ್ಟು ಬೆಂಗಳೂರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಸರ್ಕಾರಕ್ಕೆ ಈಡಿಗ ಸಮುದಾಯ ಒಗ್ಗೂಡಿದೆ ಅವರು ಸಹ ಪ್ರಬಲರಾಗಿದ್ದಾರೆ ಎನ್ನುವ ಸಂದೇಶ ಕಳುಹಿಸಬೇಕು’ ಎಂದರು.
ಪ್ರತಿ ತಾಲ್ಲೂಕಿನಲ್ಲಿ ಒಂದು ವಿದ್ಯಾರ್ಥಿ ನಿಲಯ, ಸಮುದಾಯ ಭವನ, ಶಾಲೆ, ದೇವಿಯ ಮಂದಿರ ನಿರ್ಮಾಣವಾಗಬೇಕು. ನಾರಾಯಣಗುರುಗಳ ತತ್ವ ಮತ್ತು ಸಿದ್ಧಾಂತದ ಮೇಲೆ ಎಲ್ಲರೂ ಒಗ್ಗೂಡಿ ಸಮುದಾಯವನ್ನು ಸಂಘಟಿಸಬೇಕು ಎಂದರು.
ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಅಜೇಯ್ ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಈಡಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಹಿಂದೆ ಇಲ್ಲಿ ನಡೆಸಿದ ಸಮ್ಮೇಳನವನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ಸಮ್ಮೇಳನಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿ, ಬೆಂಗಳೂರು ಸಮ್ಮೇಳನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರ ಸಹಕಾರ ಅತ್ಯವಶ್ಯ ಎಂದರು.
ಈಡಿಗ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟಸ್ವಾಮಿ, ಕೇಂದ್ರ ಸಂಘದ ಅಂಬರೀಶ್, ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ವೆಂಕಟಶ್ವಾಮಯ್ಯ, ಪಡಿ ರಮೇಶ್, ಕಡವಿಗೆರೆ ರಾಜಣ್ಣ, ರವಿಕುಮಾರ್, ಕೇಶವ, ಕುಮಾರ್, ರಾಮು, ನಿರ್ಮಲ, ಎನ್.ಚೇತನಾ, ಶೈಲಜಾ, ಶಾಂತಮ್ಮ, ನಾಗರತ್ನ, ವೆಂಕಟೇಶ್, ಅಜ್ಜೇನಹಳ್ಳಿ ರಮೇಶ್, ಗ್ರಾ.ಪಂ ಸದಸ್ಯರಾದ ಮೋಹನ್, ಲೋಕೇಶ್, ಗೋಪಾಲ್, ನಾಗರಾಜು, ರಾಮಾಂಜಿನಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.