ಶಿರಾ: ತಾಲ್ಲೂಕಿನ ಕೊಬ್ಬರಿ ಖರೀದಿ ನೋಂದಣಿ ಕೇಂದ್ರಗಳಿಗೆ ಮಂಗಳವಾರ ಬೇರೆ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಸ್ಥಳೀಯ ರೈತರ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ರೈತರು ನೋಂದಣಿಗಾಗಿ ಕಾಯುತ್ತಿದ್ದರೂ, ಪಕ್ಕದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕಿನಿಂದ ಹೆಚ್ಚಿನ ರೈತರು ಬಂದಿದ್ದಾರೆ. ರೈತರು ಎಲ್ಲಿ ಬೇಕಾದರೂ ನೋಂದಣಿ ಮಾಡಲು ಅವಕಾಶ ಇರುವುದರಿಂದ ಸ್ಥಳೀಯರಿಗಿಂತ ಬೇರೆ ತಾಲ್ಲೂಕಿನಿಂದ ಬಂದಿದ್ದಾರೆ ಎಂದರು.
ಸ್ಥಳೀಯ ರೈತರಿಗೆ ಅದ್ಯತೆ ನೀಡಿ ನಂತರ ಬೇರೆ ಕಡೆಯಿಂದ ಬಂದವರ ನೋಂದಣಿ ಮಾಡಿಕೊಳ್ಳಿ ಎಂದು ತಾಲ್ಲೂಕಿನ ರೈತರು ಒತ್ತಾಯಿಸಿದರು.
‘ಬೇರೆ ತಾಲ್ಲೂಕಿನಿಂದ ಮಧ್ಯವರ್ತಿಗಳು ಹಾಗೂ ಮಂಡಿ ವರ್ತಕರು ಅವರಿಗೆ ಬೇಕಾದವರನ್ನು ಕರೆತಂದು ನೋಂದಣಿ ಮಾಡಿಸುತ್ತಿದ್ದಾರೆ. ಇಲ್ಲಿಗೆ ಬಂದಿರುವವರ ಯಾರ ಬಳಿಯೂ ಕೊಬ್ಬರಿ ಇಲ್ಲ. ಈಗಾಗಲೇ ಅವರು ಮಾರಾಟ ಮಾಡಿದ್ದು, ಮಂಡಿ ವರ್ತಕರು ಲಾಭ ಮಾಡಿಕೊಳ್ಳಲು ಅವರನ್ನು ಬಳಸಿಕೊಳ್ಳುತ್ತಿದ್ದಾರೆ’ ರೈತರಾದ ಎಂದು ರಂಗನಾಥ್, ಕಾಂತರಾಜು ಆರೋಪಿಸಿದರು.