ಶಿರಾ: ಯಾವ ಸರ್ಕಾರದ ಅವಧಿಯಲ್ಲಿ ಎಷ್ಟು ಅಧಿಕಾರಿಗಳ ವರ್ಗಾವಣೆಯಾಗಿದೆ ಎನ್ನುವ ಬಗ್ಗೆ ಸ್ಪಷ್ಟವಾದ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ಶಾಸಕ ಡಾ.ಜಿ.ಪರಮೇಶ್ವರ ಅವರಿಗೆ ಸವಾಲು ಹಾಕಿದ್ದಾರೆ.
‘ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸಿದವರು. ಅಂಥವರು ಈ ರೀತಿ ಯಾವುದೇ ದಾಖಲೆ, ಆಧಾರ ಇಲ್ಲದೆ ನಿರಾಧಾರವಾಗಿ ಆರೋಪ ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.
‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯದ್ದು ಪರ್ಸೆಂಟೇಜ್ ಸರ್ಕಾರ’ ಎಂದು ಪರಮೇಶ್ವರ ಮಂಗಳವಾರ ಆರೋಪ ಮಾಡಿದ್ದರು. ಅವರ ಆರೋಪ ನಿರಾಧಾರ ಮತ್ತು ಸತ್ಯಕ್ಕೆ ದೂರವಾಗಿದೆ ಎಂದು ಕಾರಜೋಳ ಹೇಳಿದರು.
ಸಂಸದ ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಸಕ್ಷ ಸುರೇಶ್ ಗೌಡ, ತುಮುಲ್ ಎಸ್.ಆರ್.ಗೌಡ, ಹುಚ್ಚಯ್ಯ, ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು ಗೋಷ್ಠಿಯಲ್ಲಿ ಇದ್ದರು.