ತುಮಕೂರು: ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಬೇಕು ಎಂದು ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.
ಜಿಲ್ಲಾ ಕುರುಬರ ಸಂಘ ಹಾಗೂ ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ದುರ್ಗಾಂಬಿಕಾದೇವಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಳಶ ಸ್ಥಾಪನೆ’ ಹಾಗೂ ‘ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ದೇವಸ್ಥಾನ ನಿರ್ಮಿಸಿ, ಭಕ್ತ ಹಾಗೂ ವಿದ್ಯೆ ಕಲಿಕೆಯ ಪ್ರತೀಕರಾದ ಕಾಳಿದಾಸ ಮತ್ತು ದೇವಿಯನ್ನು ಸ್ಮರಿಸುತ್ತಿರುವುದು ಸಂತಸದ ವಿಚಾರ. ಸಮುದಾಯದಲ್ಲಿ ಅಕ್ಷರಸ್ಥರು ಹೆಚ್ಚಿದಷ್ಟು ಸಮುದಾಯವು ಮುಂದುವರಿಯುತ್ತದೆ ಎಂದರು.
ಬೆಂಗಳೂರಿನ ಸುವರ್ಣಮುಖಿ ಆಶ್ರಮದ ಆಚಾರ್ಯ ನಾಗರಾಜ್, ‘ಸಮಾಜದಲ್ಲಿ ಶಾಲೆಗಳು, ಆಶ್ರಮಗಳು ಹೆಚ್ಚಬೇಕು. ವೃದ್ಧಾಶ್ರಮಗಳು ಹೆಚ್ಚಾಗಬಾರದು. ವೃದ್ಧಾಶ್ರಮಗಳು ನಮ್ಮ ಸಂಸ್ಕೃತಿಯ ಭಾಗವಲ್ಲ. ಪೋಷಕರನ್ನು ಸಲುಹುವುದು ಮಕ್ಕಳ ಆದ್ಯ ಕರ್ತವ್ಯ’ ಎಂದು ಹೇಳಿದರು.
ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ‘ಸಮುದಾಯದಲ್ಲಿ ಅನಕ್ಷರಸ್ಥರು ಹೆಚ್ಚು ಇದ್ದಾರೆ. ತುಳಿತಕ್ಕೆ ಒಳಗಾದವರೂ ಬಹಳ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ವಿದ್ಯೆಯೊಂದೆ ಮಾರ್ಗ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಬೆಳೆಸಲು ಸಂಘವು ಪ್ರಯತ್ನಿಸುತ್ತದೆ’ ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು.
ರೋಹಿಣಿ ಗುಂಡೂರಾವ್ ಅವರು ವೀಣಾ ವಾದನ ಪ್ರಸ್ತುತ ಪಡಿಸಿ ಸಭಿಕರನ್ನು ರಂಜಿಸಿದರು. ಹರೀಶ್ ಮತ್ತು ತಂಡದವರು ಭಕ್ತಿ ಗೀತೆಗಳನ್ನು ಹಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್.ಸುರೇಶ್, ಕಾರ್ಯಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಕಾರ್ಯದರ್ಶಿ ಸಿ.ಪುಟ್ಟರಾಜು, ಜಂಟಿ ಕಾರ್ಯದರ್ಶಿಗಳಾದ ಟಿ.ಇ.ರಘುರಾಮ್, ಟಿ.ಎಚ್.ಮಹದೇವ, ಖಜಾಂಚಿ ಧರ್ಮರಾಜು ಇದ್ದರು.