ತುಮಕೂರು: ಕೇಂದ್ರ ಸರ್ಕಾರದ ‘ಸಾಮಾಜಿಕ ಸುರಕ್ಷತಾ ಮಸೂದೆ–2018’ ಕಟ್ಟಡ ಕಾರ್ಮಿಕರಿಗೆ ಮಾರಕವಾಗಿದೆ. ಕೂಡಲೇ ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕಟ್ಟಡ ಕಾರ್ಮಿಕರು ಭಾನುವಾರ ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಂಚೆ ಚಳವಳಿ ಆರಂಭಿಸಿದರು.
ನಗರದ ಉಪ್ಪಾರಹಳ್ಳಿ ಕನ್ನಡ ಶಾಲೆಯ ಬಳಿ ಕಟ್ಟಡ ಕಾರ್ಮಿಕರ ಸಂಘದ ದಕ್ಷಿಣ ಶಾಖೆ ನೇತೃತ್ವದಲ್ಲಿ ಕಾರ್ಮಿಕರು ಪತ್ರ ಬರೆದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಉಮೇಶ್, ‘ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಯಾವುದೇ ಚರ್ಚೆ ಇಲ್ಲದೇ ಜಾರಿಗೊಳಿಸಲಾಗಿದೆ’ ಎಂದು ಆರೋಪಿಸಿದರು.
ಸಂಘದ ದಕ್ಷಿಣ ಶಾಖೆಯ ಕಾರ್ಯದರ್ಶಿ ರಾಮಣ್ಣ, ‘ಪ್ರಧಾನಿಯವರು ಕೂಡಲೇ ಸಾಮಾಜಿಕ ಸುರಕ್ಷಾ ಮಸೂದೆ 2018ನ್ನು ಹಿಂದಕ್ಕೆ ಪಡೆಯಬೇಕು. ಕಟ್ಟಡ ಕಾರ್ಮಿಕರು ಮತ್ತು ನಿರ್ಮಾಣ ವಲಯವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಸೆ.19ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಹನುಮಂತರಾವ್, ಖಜಾಂಚಿ ಮಕ್ಸೂದ್, ಜಿಲ್ಲಾ ಮುಖಂಡ ಎಚ್.ಆರ್ ಲಕ್ಷ್ಮಣ್, ಸಂಘಟನೆಯ ಸ್ಥಳೀಯ ಮುಖಂಡರಾದ ರವಿ, ಹನುಮಂತರಾಜು, ನಂದೀಶ್, ರುದ್ರೇಶ್, ಅಯೂಬ್, ಉಮೇಶ್, ಬಾಷಣ್ಣ ಇದ್ದರು.