ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಬಿಜೆಪಿಯಿಂದ ತಿಗಳರ ಸಮಾವೇಶ

Published 24 ಮಾರ್ಚ್ 2024, 7:52 IST
Last Updated 24 ಮಾರ್ಚ್ 2024, 7:52 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಶನಿವಾರ ಬಿಜೆಪಿಯಿಂದ ತಿಗಳ ಸಮುದಾಯದ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮುಖಂಡರು ಮನವಿ ಮಾಡಿದರು.

ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ‘ದೇಶದ ಸರ್ವತೋಮುಖ ಅಭಿವೃದ್ಧಿಗೆ, ದೇಶದ ರಕ್ಷಣೆ ಹಾಗೂ ಜನರು ಶಾಂತಿ, ನೆಮ್ಮದಿಯಿಂದ ಬಾಳಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಕೇವಲ ವಾರಾಣಸಿಯವರು ಮಾತ್ರ ಮೋದಿ ಮತದಾರರಲ್ಲ. ಜಿಲ್ಲೆಯ ಮತದಾರರೂ ಮೋದಿ ಗೆಲ್ಲಿಸುತ್ತಾರೆ. ನನಗೆ ಮತ ನೀಡುವುದರೊಂದಿಗೆ ಮೋದಿ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ಮಾಡಬೇಕು’ ಕೇಳಿಕೊಂಡರು.

‘ಈ ಬಾರಿಯ ಚುನಾವಣೆ ಭವ್ಯ ಭಾರತದ ಭವಿಷ್ಯ ನಿರ್ಧಾರ ಮಾಡುತ್ತದೆ. ದೇಶದ ಚುಕ್ಕಾಣಿ ಹಿಡಿಯಲು ಸಮರ್ಥ ನಾಯಕತ್ವ ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ಜನರ ಮೇಲಿದೆ. ಈ ಚುನಾವಣೆಯಲ್ಲಿ ನಾನು ನಿಮಿತ್ತ ಮಾತ್ರ. ನನಗೆ ಮತ ನೀಡುವುದು ಮೋದಿಗೆ ಮತ ನೀಡಿದಂತೆ’ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ತಿಗಳ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಇಂತಹ ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ತಿಳಿಸಿದರು.

ಶಾಸಕ ಬಿ.ಸುರೇಶ್‍ಗೌಡ, ‘ಸೋಮಣ್ಣ ಅವರನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ. ಜಿಲ್ಲೆಯ ನೀರಾವರಿ, ರಸ್ತೆ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದರು.

ಬಿಜೆಪಿ ಮುಖಂಡರಾದ ದಿಲೀಪ್‍ ಕುಮಾರ್, ಎಲ್.ಕಮಲ, ಟಿ.ಎಚ್.ಕೃಷ್ಣಪ್ಪ, ಹನುಮಂತರಾಜು, ತಿಗಳ ಸಮಾಜದ ಮುಖಂಡರಾದ ಅಣೆತೋಟ ಶ್ರೀನಿವಾಸ್, ವೆಂಕಟಪ್ಪ, ಹುಚ್ಚೇಗೌಡ, ಅನಂತರಾಜು, ಲಕ್ಷ್ಮಯ್ಯ, ಬಲರಾಂ, ಸೂರ್ಯಪ್ರಕಾಶ್, ಪುಟ್ಟಲಕ್ಷ್ಮಮ್ಮ, ಗುಬ್ಬಿ ನಂಜೇಗೌಡ, ವೈ.ಟಿ.ರಾಜೇಂದ್ರ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT