ತುಮಕೂರು: ನಗರದಲ್ಲಿ ಶನಿವಾರ ಬಿಜೆಪಿಯಿಂದ ತಿಗಳ ಸಮುದಾಯದ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮುಖಂಡರು ಮನವಿ ಮಾಡಿದರು.
ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ‘ದೇಶದ ಸರ್ವತೋಮುಖ ಅಭಿವೃದ್ಧಿಗೆ, ದೇಶದ ರಕ್ಷಣೆ ಹಾಗೂ ಜನರು ಶಾಂತಿ, ನೆಮ್ಮದಿಯಿಂದ ಬಾಳಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಕೇವಲ ವಾರಾಣಸಿಯವರು ಮಾತ್ರ ಮೋದಿ ಮತದಾರರಲ್ಲ. ಜಿಲ್ಲೆಯ ಮತದಾರರೂ ಮೋದಿ ಗೆಲ್ಲಿಸುತ್ತಾರೆ. ನನಗೆ ಮತ ನೀಡುವುದರೊಂದಿಗೆ ಮೋದಿ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ಮಾಡಬೇಕು’ ಕೇಳಿಕೊಂಡರು.
‘ಈ ಬಾರಿಯ ಚುನಾವಣೆ ಭವ್ಯ ಭಾರತದ ಭವಿಷ್ಯ ನಿರ್ಧಾರ ಮಾಡುತ್ತದೆ. ದೇಶದ ಚುಕ್ಕಾಣಿ ಹಿಡಿಯಲು ಸಮರ್ಥ ನಾಯಕತ್ವ ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ಜನರ ಮೇಲಿದೆ. ಈ ಚುನಾವಣೆಯಲ್ಲಿ ನಾನು ನಿಮಿತ್ತ ಮಾತ್ರ. ನನಗೆ ಮತ ನೀಡುವುದು ಮೋದಿಗೆ ಮತ ನೀಡಿದಂತೆ’ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ತಿಗಳ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಇಂತಹ ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ತಿಳಿಸಿದರು.
ಶಾಸಕ ಬಿ.ಸುರೇಶ್ಗೌಡ, ‘ಸೋಮಣ್ಣ ಅವರನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ. ಜಿಲ್ಲೆಯ ನೀರಾವರಿ, ರಸ್ತೆ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದರು.