ಕುಣಿಗಲ್: ರೈತರು ಆಧುನಿಕ ತಂತ್ರಜ್ಞಾನದ ಜತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬೆಳೆ ಬೆಳೆಯಬೇಕು. ಬೆಳೆಗಳ ಮೌಲ್ಯವರ್ಧನಗೆ ಮಾಡಿ ರೈತರ ಗುಂಪುಗಳ ಮೂಲಕ ಮಾರಾಟ ಮಾಡಿದರೆ ಉದ್ಯಮಿಗಳಾಗಲು ಸಾಧ್ಯ ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಸುರೇಶ್ ಸಲಹೆ ನೀಡಿದರು.
ತಾಲ್ಲೂಕಿನ ರಂಗಸ್ವಾಮಿಗುಡ್ಡ ಕಾವಲು ಪ್ರದೇಶದಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಬಾರ್ಡ್ ಬೆಂಗಳೂರು, ಸಿಮಿಟ್ ಹೈದ್ರಾಬಾದ್, ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಬುಧವಾರ ನಡೆದ ಸಿರಿಧಾನ್ಯ ಮೇಳ ಮತ್ತು ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿವಿಗೆ ಸಂಬಂಧಪಟ್ಟ ಸಂಶೋಧನಾ ಕೇಂದ್ರಗಳು, ನೂತನ ಸುಧಾರಿತ ತಳಿಗಳು, ಬೆಳೆ ಪದ್ಧತಿಗಳ ರೈತ ಸ್ನೇಹಿ ಮತ್ತು ರೈತರ ಸಮಸ್ಯೆಗಳಿಗೆ ಅನುಗುಣವಾಗಿ ಪ್ರಯೋಗ ನಡೆಸಿ ಕ್ಷೇತ್ರೋತ್ಸವದಲ್ಲಿ ಪ್ರದರ್ಶನ ಹಮ್ಮಿಕೊಂಡಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಪ್ರಭಾಕರ್ ಶೆಟ್ಟಿ, ನೀರಿನ ಸಂರಕ್ಷಣೆ, ಮಣ್ಣಿನ ಪೋಷಕಾಂಶ ನಿರ್ವಹಣೆ ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಲು ಸಲಹೆ ನೀಡಿದರು.
ಮಡಕೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ,, ಸಹಾಯಕ ಮುಖ್ಯ ಪ್ರಬಂಧಕ ಕೀರ್ತಿ ಪ್ರಭಾ, ಸಂಶೋಧನಾ ನಿರ್ದೇಶಕ ವೆಂಕಟೇಶ್, ಕ್ಷೇತ್ರ ಅಧೀಕ್ಷಕ ಶ್ರೀನಿವಾಸ್, ಮಂಡ್ಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಶಿವಕುಮಾರ್, ಕೊನೆಹಳ್ಳಿ ವಿಜ್ಞಾನ ಕೇಂದ್ರದ ಗೋವಿಂದೇಗೌಡ, ಕೆಂಪೇಗೌಡ ಇದ್ದರು.