ತಿಪಟೂರು: ಧರ್ಮವಿಲ್ಲದೆ ಬದುಕಿಲ್ಲ ಎಂಬುದನ್ನು ಜನರು ಅರಿಯಬೇಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ್ ಅಭಿಪ್ರಾಯಪಟ್ಟರು.
ತಿಪಟೂರು ಕಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ವೀರಶೈವ ಲಿಂಗಾಯತ ಸಂಘಟನೆ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವಕ್ಕೆ ವಿನೂತನವಾದ ಧಾರ್ಮಿಕ ಸಂದೇಶ ನೀಡಿದ್ದು ವೀರಶೈವ ಲಿಂಗಾಯತ ಸಮಾಜ. ಕಾಯಕ, ದಾಸೋಹ ಪ್ರಜ್ಞೆಯ ಆವಿಷ್ಕಾರವನ್ನು ಮಾಡಿದ್ದೇ ವೀರಶೈವ ಲಿಂಗಾಯತ ಧರ್ಮ. ಇಡೀ ವಿಶ್ವಕ್ಕೆ ವಚನ ಸಾಹಿತ್ಯ ಮಾದರಿಯಾಗಿದೆ ಎಂದರು.
ಜೀವನ ಸಂವಿಧಾನ, ನೀತಿ ಸಂಹಿತೆ ನೀಡಿದ ಧರ್ಮ ಇದಾಗಿದೆ. ರಾಜಕಾರಣಿಗಳು ಧರ್ಮ ಪ್ರಸಾರದ ಕಡೆಗೆ ಗಮನ ನೀಡಿಲ್ಲ. ಸಮಾಜದ ಅಧಿಕಾರಿಗಳು, ಉದ್ಯಮಿಗಳು ಸಮಾಜದ ಒಳಿತಿಗೆ ಯೋಚಿಸದೆ ಸಂಪತ್ತು ಹೆಚ್ಚಿಸಿಕೊಳ್ಳುವಲ್ಲಿ ತಲ್ಲಿನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ವೀರಶೈವ ಧರ್ಮದಲ್ಲಿ ಧರ್ಮ ಸಿದ್ಧಾಂತ, ಕರ್ಮ ಸಿದ್ದಾಂತ ಎರಡೂ ಒಂದೇ ಆಗಿದೆ. ಬಸವಣ್ಣ ಅವರು, ಶರಣರ ಚಿಂತನೆ ಮೂಲಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯ ಮಾಡಿದ್ದಾರೆ ಎಂದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ವೀರಶೈವ ಧರ್ಮ ವಿಶ್ವ ಮಾನವೀಯತೆ ಕಾಪಾಡುವ ಧರ್ಮ. ಸಮುದಾಯವು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಕೊಡುಗೆ ನೀಡಿದೆ ಎಂದರು.
ತಿಪಟೂರು ವೀರಶೈವ ಲಿಂಗಾಯತ ಸಂಘಟನೆ ಅಧ್ಯಕ್ಷ ರೇಣುಕಾರಾಧ್ಯ ಸಿ.ಎಸ್., ಅರಸೀಕೆರೆ ಬಸವರಾಜು, ಚಲನಚಿತ್ರ ನಿರ್ದೇಶಕ ಮನು, ಚಿಕ್ಕಮಗಳೂರಿನ ಸಾಹಿತಿ ಚಟ್ನಹಳ್ಳಿ ಮಹೇಶ್, ಮಾಜಿ ನಗರಸಭೆ ಅಧ್ಯಕ್ಷ ಟಿ.ಎಸ್.ಶಿವಪ್ರಸಾದ್, ಕೊಬ್ಬರಿ ವರ್ತಕ ಟಿ.ಎನ್.ಪರಮೇಶ್ವರಯ್ಯ, ಎಂ.ಆರ್.ಸಂಗಮೇಶ್, ಇನ್ನರವೀಲ್ ಕ್ಲಬ್ ತಾಲ್ಲೂಕು ಅಧ್ಯಕ್ಷೆ ಎಂ.ಎಸ್.ಸ್ವರ್ಣಗೌರಮ್ಮ, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಆರ್.ಎಂ.ನಾಗರತ್ನ, ತಾ.ಪಂ ಮಾಜಿ ಅಧ್ಯಕ್ಷ ಎನ್.ಎಂ.ಸುರೇಶ್, ಹರಿಸಮುದ್ರ ಗಂಗಾಧರ್, ಮಾಜಿ ನಗರಸಭೆ ಸದಸ್ಯ ಪ್ರಸನ್ನಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಇ.ರಮೇಶ್, ನಗರಸಭೆ ಸದಸ್ಯರಾದ ಶಶಿಕಿರಣ್, ಸಂಗಮೇಶ್ ಕಳ್ಳಿಹಾಲ್, ಯಮುನಾ ಧರಣೀಶ್, ಪದ್ಮ ತಿಮ್ಮೇಗೌಡ, ಅಶ್ವಿನಿ ದೇವರಾಜು ಸೇರಿದಂತೆ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.