ತುಮಕೂರು: ಪರಸ್ಪರ ಸಹಕಾರದಿಂದ ಕೆಲಸ ಮಾಡುವುದನ್ನು ಕಲಾವಿದರಿಂದ ಕಲಿಯಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಭಿಪ್ರಾಯಪಟ್ಟರು.
ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ದೇವರಾಜು ಅವರ ನಿರ್ದೇಶನದ ‘ಸಂಪ್ಲಿಮೆಂಟರಿ’ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸೋತ ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕನಾಗಿ ಹೇಗೆ ಸಾಂತ್ವನ ಹೇಳಬಹುದು ಎಂಬುದನ್ನು ಈ ಚಿತ್ರದ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಮೊದಲ ಚಿತ್ರವೇ ಉತ್ತಮವಾಗಿ ಮೂಡಿಬಂದಿದ್ದು ಪ್ರದರ್ಶನಗೊಂಡ ನಂತರ ಪ್ರಶಸ್ತಿ ಗಳಿಸುವುದು ಖಚಿತ ಎಂದು ಹೇಳಿದರು.
ವಿವಿಯಲ್ಲಿ ವಿಶಿಷ್ಟ ಸಿಬ್ಬಂದಿ ಇರುವುದು ಶ್ಲಾಘನೀಯ. ಈ ಚಿತ್ರವು ಜ.25 ರಂದು ಬೆಳ್ಳಿತೆರೆಗೆ ಬರಲಿದ್ದು ಶತದಿನಗಳ ಕಾಲ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.
ದೇವರಾಜು ಮಾತನಾಡಿ, ‘ಸಿನಿಮಾ ಮತ್ತು ಜೀವನಕ್ಕೆ ಸಾಮ್ಯತೆ ಇದೆ. ನನ್ನ ಜೀವನದಲ್ಲಿ ಮೊದಲನೇ ಪ್ರಯತ್ನದಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲನಾಗಿದ್ದು, ನಂತರ ಯಶಸ್ಸು ಕಂಡಿದ್ದೇನೆ. ಈ ನಿಟ್ಟಿನಲ್ಲಿ ನಿರ್ಮಿಸಿದ ಚಿತ್ರ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ’ ಎಂದು ಹೇಳಿದರು.