ತುಮಕೂರು: ಬುದ್ಧ, ಬಸವ, ಅಂಬೇಡ್ಕರ್ ತತ್ವ, ಸಿದ್ಧಾಂತದ ಬಗ್ಗೆ ಮಾತಿನಲ್ಲಿ ಹೇಳುವವರು ಹೆಚ್ಚಾಗಿದ್ದು, ಪಾಲಿಸುವವರು ಕಡಿಮೆಯಾಗಿದ್ದಾರೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.
ನಗರದಲ್ಲಿ ಶನಿವಾರ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಮಾಸಿಕ ಸಭೆ, ಕಾರ್ಮಿಕರ ದಿನ ಆಚರಣೆ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರು ನುಡಿದಂತೆ ನಡೆಯಬೇಕು. ಮಾತುಗಳಲ್ಲಿ ಹೇಳಿದ್ದು ಅನುಷ್ಠಾನಕ್ಕೆ ತರಬೇಕು. ಜೂನ್ ತಿಂಗಳಿನಲ್ಲಿ ಬೆಂಗಳೂರಲ್ಲಿ ನೌಕರರ ಸಮಾವೇಶ ನಡೆಯಲಿದೆ. ಎಲ್ಲರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಜಗದೀಶ್, ‘ಬಸವಣ್ಣ ಮಾನವತಾವಾದಿ, ವಿಶ್ವಗುರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿವಾರಣೆಗೆ ಶ್ರಮಿಸಿದ್ದರು’ ಎಂದು ತಿಳಿಸಿದರು.
ಅನುಪಮ ನಿರಂಜನ ಪ್ರಶಸ್ತಿಗೆ ಭಾಜನರಾದ ರಮಾಕುಮಾರಿ ಅವರನ್ನು ಸನ್ಮಾನಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾರಮ್ಮದ, ಭವಾನಮ್ಮ, ಮಂಜುಳಾದೇವಿ, ಸುಶೀಲಮ್ಮ, ನರೇಂದ್ರಕುಮಾರ್ ಇತರರು ವಚನ, ಹಾಡು, ಕವಿತೆ–ಕವನ ವಾಚಿಸಿದರು.
ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ, ಪದಾಧಿಕಾರಿಗಳಾದ ಪಿ.ನರಸಿಂಹರೆಡ್ಡಿ, ಅನಂತರಾಮಯ್ಯ, ಪಿ.ಮಲ್ಲೇಶಯ್ಯ, ಈಶ್ವರಯ್ಯ, ಮಹದೇವಯ್ಯ, ಟಿ.ಎನ್.ನರಸಿಂಹಮೂರ್ತಿ, ಪಿ.ಹುಚ್ಚಯ್ಯ ಇತರರು ಭಾಗವಹಿಸಿದ್ದರು.