ನವದೆಹಲಿ: ಅಧಿಕಾರ ಅವಧಿ ಮುಗಿದ ಬಿಸಿಸಿಐ ಪದಾಧಿಕಾರಿಗಳನ್ನು ತೆಗೆದು ಹಾಕುವಂತೆ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಶಿಫಾರಸು ಮಾಡಿದೆ. ಬಿಸಿಸಿಐ ನಿಯಮಾವಳಿ ಪ್ರಕಾರ ಇದು ಅನಿವಾರ್ಯ ಎಂದು ಅದು ಹೇಳಿದೆ.
ವಿನೋದ್ ರಾಯ್ ಮತ್ತು ಡಯಾನ ಎಡುಲ್ಜಿ ಅವರ ಸಮಿತಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಿದ್ದು ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಕೋಶಾಧಿಕಾರಿ ಅನಿರುದ್ಧ್ ಚೌಧರಿ ಅವರನ್ನು ತೆಗೆದು ಹಾಕಿ ಚುನಾವಣೆ ಮೂಲಕ ಹೊಸಬರನ್ನು ಆರಿಸಲು ಕೋರಿದೆ.
ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಹೊಸ ನಿಯಮಾವಳಿಯನ್ನು ರಚಿಸುವ ಮೊದಲೇ ಸಾಮಾನ್ಯ ಸಭೆ ನಡೆಸುವುದಕ್ಕೂ ಶಿಫಾರಸಿನಲ್ಲಿ ಅವಕಾಶ ಕೋರಲಾಗಿದೆ. ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರ ಅಧಿಕಾರ ಅವಧಿ ಮುಗಿದಿರುವುದನ್ನು ಕೂಡ ಸಿಒಎ ಸಮಿತಿ ತಿಳಿಸಿದೆ.