ತುಮಕೂರು: ‘ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ತಂಡವೇ ಕಾರಣ’ ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್ಗೌಡ ಶನಿವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣೆ ನಂತರ ಮುಖ್ಯಮಂತ್ರಿ ಸ್ಥಾನ ಕೇಳಬಾರದು ಎಂಬ ಕಾರಣಕ್ಕೆ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ. ನೈತಿಕವಾಗಿ ಕುಸಿಯುವಂತೆ ಮಾಡುವ ಸಲುವಾಗಿ ಅವರ ವಿರುದ್ಧ ಸಂಚು ರೂಪಿಸಿದ್ದರು’ ಎಂದು ದೂರಿದರು.
‘ಸಿದ್ದರಾಮಯ್ಯ ಜತೆಗೆ ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಅಹಿಂದ ತಂಡ ಸೇರಿಕೊಂಡು ಸೋಲುವಂತೆ ಮಾಡಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ತಮ್ಮ ಪಕ್ಷದವರ ವಿರುದ್ಧ ಸಂಚು ರೂಪಿಸಿದ್ದರು. ಅವರ ಸೋಲಿಗೆ ಸಿ.ಎಂ ಅಲ್ಲದೇ ಬೇರಾರು ಕಾರಣರಲ್ಲ’ ಎಂದು ಹೇಳಿದರು.
‘ಚುನಾವಣೆಗೆ ಮುನ್ನವೇ ಸೋಲಿಸುವ ಸಂಚು ನಡೆದಿರುವುದು, ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸುತ್ತಾರೆ ಎಂದು ಹೇಳಿದ್ದೆ. ಈಗ ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ’ ಎಂದು ಎಂದರು.
ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗದಿದ್ದರೆ ರಾಜ್ಯದಲ್ಲಿ ಸರ್ಕಾರ ಉಳಿಯುವುದಿಲ್ಲ. ಕಾಂಗ್ರೆಸ್ನಲ್ಲಿ ಒಳಜಗಳ ಆರಂಭವಾಗಲಿದ್ದು, ಈಗಾಗಲೇ ಬೆಳಗಾವಿ ಭಾಗದಲ್ಲಿ ಅಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ತಿಳಿಸಿದರು.