ಕೊರಟಗೆರೆ: ಮಗನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಪ್ರಕರಣ ಭೇದಿಸಿರುವ ಪಟ್ಟಣದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮದ ಮನು (33) ಕೊಲೆಯಾದ ವ್ಯಕ್ತಿ.
ಮನು ತಂದೆ ನಾಗರಾಜು ಅಲಿಯಾಸ್ ತಾತಪ್ಪ ಹಾಗೂ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರವಿ, ಮಲ್ಲಿಕಾರ್ಜುನ, ಕೆಂಪರಾಜು ಬಂಧಿತರು.
ಘಟನೆ ವಿವರ: ಆರೋಪಿ ನಾಗರಾಜು ಅವರ ಮಗ ಮನು ಮದ್ಯಪಾನದ ದಾಸನಾಗಿದ್ದ. ಕುಡಿಯಲು ಹಾಗೂ ಖರ್ಚಿಗೆ ಹಣ ನೀಡುವಂತೆ ನಿತ್ಯ ತಂದೆಯನ್ನು ಪೀಡಿಸುತ್ತಿದ್ದ.
ಮಾರ್ಚ್ 26ರಂದು ನಾಗರಾಜು ಕೆಲಸಗಾರರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಹೋಗಿದ್ದ ಮಗ ಮನು ಹಣ ನೀಡುವಂತೆ ಪೀಡಿಸಿ ತಂದೆಯನ್ನು ಮನ ಬಂದಂತೆ ನಿಂದಿಸಿದ್ದ. ಇದರಿಂದ ಬೇಸತ್ತ ನಾಗರಾಜು ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ಮಗನ ತಲೆಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ. ಮನು ಸ್ಥಳದಲ್ಲೆ ಮೃತಪಟ್ಟಿದ್ದ.
ಮೃತ ದೇಹವನ್ನು ನಾಗರಾಜು ಹಾಗೂ ಕೆಲಸಕ್ಕೆ ಬಂದಿದ್ದ ರವಿ, ಮಲ್ಲಿಕಾರ್ಜುನ, ಕೆಂಪರಾಜು ಅವರ ಸಹಾಯದಿಂದ ಸೌದೆ ಹಾಗೂ ಡೀಸೆಲ್ ತರಿಸಿ ಮನೆಯ ಹಿಂಬದಿಯ ತಿಪ್ಪೆ ಜಾಗದಲ್ಲಿ ಸುಟ್ಟಿದ್ದರು.
ಈ ವಿಚಾರ ಸ್ಥಳೀಯರ ಬಾಯಿಂದ ಬಾಯಿಗೆ ಹರಿದು, ಕೊನೆಗೆ ಪೊಲೀಸರಿಗೂ ತಲುಪಿತ್ತು. ತನಿಖೆ ನಂತರ ಪ್ರಕರಣ ದೃಢಪಟ್ಟಿದೆ.
ಸಿಪಿಐ ಆರ್.ಪಿ.ಅನಿಲ್, ಪಿಎಸ್ಐ ಬಿ.ಮಂಜುನಾಥ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.