ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್. ಪುರ ಗ್ರಾಮದಲ್ಲಿ ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟಿದ್ದ ಆರೋಪಿಯನ್ನು ಗ್ರಾಮಸ್ಥರು ಹಾಗೂ ಭಕ್ತರು ಮಂಗಳವಾರ ಪೊಲೀಸರ ವಶಕ್ಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಗೋರಕ್ಪುರ ಗ್ರಾಮದ ಉದಾರಿ ಬಿನ್ ರಾಧೇಶ್ಯಾಂ ಬಂಧಿತ ಆರೋಪಿ. ಈತ ಸೋಮವಾರ ಮಧ್ಯಾಹ್ನ ಮುಜರಾಯಿ ಇಲಾಖೆಗೆ ಸೇರಿದ ಕಲ್ಲೇಶ್ವರ ರಥಕ್ಕೆ ಬೆಂಕಿ ಹಚ್ಚಿದ್ದ. ರಥ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಇದರಿಂದ ಸುಮಾರು ₹ 20 ಲಕ್ಷ ಮೌಲ್ಯದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ಧ ನಿಟ್ಟೂರು ಕಂದಾಯ ತನಿಖಾಧಿಕಾರಿ ಮೋಹನ್ ಕುಮಾರ್ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ಸ್ಥಳ ಪರಿಶೀಲಿಸಿದರು. ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ತಿಳಿಸಿದ್ದಾರೆ..