ತುಮಕೂರು: ಸಂಶೋಧನೆಗಳು ಪಠ್ಯಕ್ರಮದ ಸುಧಾರಣೆ, ಪ್ರಗತಿಗೆ ಸಹಾಯಕವಾಗುತ್ತವೆ. ಹೆಚ್ಚಿನ ಜ್ಞಾನ, ಕೌಶಲ, ತಿಳಿವಳಿಕೆಯು ವೃತ್ತಿಪರ ಕಲಿಕೆಗೆ ಆಧಾರವಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ‘ಸಾಹೇ’ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಪರಮೇಶ್ವರ ತಿಳಿಸಿದರು.
ನಗರದ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಪಠ್ಯ-ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿ ಒಳಗೊಂಡ ‘ಪರಂ-24’ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರಕಟಿಸುವ ವೈಜ್ಞಾನಿಕ ಮತ್ತು ಸಂಶೋಧನಾ ನಿಯತಕಾಲಿಕೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತವೆ. ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶಿ ಕೈಪಿಡಿಗಳಾಗುತ್ತವೆ. ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಲೇಖನ, ಶೈಕ್ಷಣಿಕ ಪ್ರಬಂಧ ಪ್ರಕಟವಾಗುವುದರಿಂದ ಸಂಶೋಧಕರ ಪಾತ್ರ ಮತ್ತು ಸಂಶೋಧನೆಯ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದರು.
ಶೈಕ್ಷಣಿಕ ನಿಯತಕಾಲಿಕೆಗಳು ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಉತ್ತಮ ಸಂವಹನಕ್ಕೆ ಸಹಕಾರಿಯಾಗುತ್ತವೆ. ಶಿಕ್ಷಣ ನಮ್ಮ ಜೀವನದ ಎಲ್ಲ ಸವಾಲು, ಅನುಮಾನ ಮತ್ತು ಭಯಗಳನ್ನು ತೊಡೆದುಹಾಕಲು ಸಹಾಯ ಮಾಡುವ ಸಾಧನವಾಗಿದೆ ಎಂದು ಹೇಳಿದರು.
ಸಾಹೇ ವಿ.ವಿ ರಿಜಿಸ್ಟ್ರಾರ್ ಎಂ.ಝಡ್.ಕುರಿಯನ್, ಎಸ್ಎಸ್ಐಟಿ ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್, ಎಂಸಿಎ ವಿಭಾಗದ ಮುಖ್ಯಸ್ಥ ಪ್ರೊ.ಡಿ.ರಮೇಶ್ ಇತರರು ಹಾಜರಿದ್ದರು.