ಹುಳಿಯಾರು (ತುಮಕೂರು): ಹೋಬಳಿಯ ಹೊಯ್ಸಳಕಟ್ಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ವೈದ್ಯರು ಚುಚ್ಚುಮದ್ದು ನೀಡಿದ ನಂತರ ಎರಡು ತಿಂಗಳ ಮಗು ಮೃತಪಟ್ಟಿದೆ.
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ತಮ್ಮ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು, ಸಂಬಂಧಿಗಳು ಮತ್ತು ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದರು.
ಸೋಮನಹಳ್ಳಿ ಗ್ರಾಮದ ಮಧು ಮತ್ತು ಶ್ರುತಿ ದಂಪತಿ ಮಗುವನ್ನು ಚುಚ್ಚುಮದ್ದು ಕೊಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಚುಚ್ಚುಮದ್ದು ಪಡೆದು ಮನೆಗೆ ಹೋದ ನಂತರ ಮಗು ಮೃತಪಟ್ಟಿದೆ. ಆಸ್ಪತ್ರೆಗೆ ಕರೆ ತರುವ ಮುನ್ನ ಮಗು ಆರೋಗ್ಯವಾಗಿದ್ದು, ಚುಚ್ಚುಮದ್ದು ಪಡೆದ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಯಿತು ಎಂದು ಮಗುವಿನ ತಂದೆ ಮಧು ಆರೋಪಿಸಿದರು.
ಚುಚ್ಚುಮದ್ದಿನಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ಶಾಸಕ ಸುರೇಶ್ ಬಾಬು ಅವರು ವೈದ್ಯರು ಮತ್ತು ಪೋಷಕರ ಜೊತೆ ಮಾತುಕತೆ ನಡೆಸಿದರು.
ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ನೀಡಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಆಸ್ಪತ್ರೆಗೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಸಿ.ಆರ್. ಮೋಹನ್ ಅವರು ಆರೋಗ್ಯ ಕೇಂದ್ರದ ಡಾ. ಮಧು ಅವರನ್ನು ತಕ್ಷಣ ಬದಲಾಯಿಸಿ ಡಾ.ಸ್ವರೂಪ್ ಅವರನ್ನು ನಿಯೋಜಿಸಿದರು.