ತುಮಕೂರು: ನಗರದ ಹೊರ ವಲಯದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ರಸಗೊಬ್ಬರ ವಶಪಡಿಸಿಕೊಂಡಿದ್ದಾರೆ.
ಪರವಾನಗಿ ಮತ್ತು ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದ ಕೆ.ಎಸ್.ಆಗ್ರೋಕೆಮಿಕಲ್ಸ್ ಜೈವಿಕ ಗೊಬ್ಬರ ಉತ್ಪಾದನಾ ಘಟಕದ ಮೇಲೆ ಬೆಂಗಳೂರಿನ ಕೃಷಿ ಇಲಾಖೆಯ (ಜಾಗೃತ ಕೋಶ) ಹೆಚ್ಚುವರಿ ನಿರ್ದೇಶಕ ಕೆ.ಜಿ.ಅನೂಪ್, ಜಂಟಿ ನಿರ್ದೇಶಕ ವಿದ್ಯಾನಂದ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
‘ವಿವಿಧ ಸರಬರಾಜುದಾರರಿಂದ ರಿಯಾಯಿತಿ ದರದ ರಸಗೊಬ್ಬರವನ್ನು ಅನಧಿಕೃತವಾಗಿ ಖರೀದಿಸಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ರಸಗೊಬ್ಬರ ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಕೃಷಿ ಇಲಾಖೆ ಎಂದು ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದರು.
ಊರ್ಡಿಗೆರೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ನಾಗರಾಜ ಇತರರು ಭಾಗವಹಿಸಿದ್ದರು.