ಪಾವಗಡ: ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದ ಆರೋಪಿ ಕೊತ್ತಗೆರೆ ಶಂಕರ್ನನ್ನು ತುಮಕೂರು ಮತ್ತು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ತಂಡ ಬುಧವಾರ ಬಂಧಿಸಿದೆ.
2005ರ ಫೆಬ್ರುವರಿ 10ರಂದು ರಾತ್ರಿ 300 ಮಂದಿ ಮಾವೊಯಿಸ್ಟ್ ನಕ್ಸಲರು ಗ್ರನೇಡ್, ಬಂದೂಕು, ಬಾಂಬ್ ಬಳಸಿ ಏಳು ಪೊಲೀಸರನ್ನು ಹತ್ಯೆ ಮಾಡಿದ್ದರು. ಒಬ್ಬ ಖಾಸಗಿ ಬಸ್ ಕ್ಲೀನರ್ ಮೃತಪಟ್ಟಿದ್ದರು. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದರು.
ಪಟ್ಟಣದ ನ್ಯಾಯಾಲಯ ಬಾಡಿ ವಾರೆಂಟ್ ಹೊರಡಿಸಿತ್ತು.
ಬೆಂಗಳೂರಿನ ಬಿಬಿಎಂಪಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ನರಸಿಂಹ, ಪದ್ಮ, ಓಬಳೇಶ, ಆಂಜನೇಯುಲು, ರಾಮಮೋಹನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.