ತುಮಕೂರು: ನಗರದ ಜನರ ದಾಹ ನೀಗಿಸುವ ಬುಗುಡನಹಳ್ಳಿ ಕೆರೆ ಖಾಲಿಯಾಗಿದ್ದು, ಹೇಮಾವತಿಯಿಂದ (ಗೊರೂರು ಜಲಾಶಯ) ನೀರು ಹರಿಸಲು ಸಿದ್ಧತೆಗಳು ನಡೆದಿವೆ.
ಜಲಾಶಯದಿಂದ ಮಂಗಳವಾರ ನೀರನ್ನು ಹೊರ ಬಿಡಲಾಗುತ್ತಿದ್ದು, ಬುಗುಡನಹಳ್ಳಿ ಕೆರೆ ತಲುಪಲು ಎರಡು ದಿನ ತೆಗೆದುಕೊಳ್ಳಲಿದೆ. ಹೇಮಾವತಿ ನಾಲೆ ಸಹ ಒಣಗಿ ಬಾಯ್ದೆರೆದು ನಿಂತಿದ್ದು, ನೀರು ಹರಿದು ಬರುವುದು ಸ್ವಲ್ಪ ನಿಧಾನವಾಗಲಿದೆ. ಗುರುವಾರ ಸಂಜೆ ಅಥವಾ ಶುಕ್ರವಾರದ ವೇಳೆಗೆ ಕೆರೆಗೆ ನೀರು ಹರಿದು ಬರಲಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬುಗುಡನಹಳ್ಳಿ ಜಲ ಮೂಲವನ್ನು ಬಿಟ್ಟರೆ ನಗರಕ್ಕೆ ಕುಡಿಯುವ ನೀರು ಪೂರೈಸಲು ಬೇರೆ ಯಾವುದೇ ಮೂಲಗಳು ಇಲ್ಲ. ಕೆರೆ ಬರಿದಾಗುವ ಹಂತ ತಲುಪಿದ್ದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಪ್ರಸ್ತುತ ಕೆರೆಯಲ್ಲಿ 90 ಎಂಸಿಎಫ್ಟಿ ನೀರಿದ್ದು, ಅದರಲ್ಲಿ 60 ಎಂಸಿಎಫ್ಟಿ ನೀರನ್ನು ಬಳಸಿಕೊಳ್ಳಬಹುದು. ಉಳಿದ 30 ಎಂಸಿಎಫ್ಟಿ ನೀರು ಡೆಡ್ ಸ್ಟೋರೇಜ್. ನಗರದ ಜನರ ಬೇಡಿಕೆಗೆ ಅನುಗುಣವಾಗಿ ನೀರು ಸರಬರಾಜು ಮಾಡಿದ್ದರೆ ಈ ವೇಳೆಗಾಗಲೇ ಕೆರೆ ಖಾಲಿಯಾಗುತಿತ್ತು. ಮಿತವಾಗಿ ಸರಬರಾಜು ಮಾಡುವ ಮೂಲಕ ಸ್ವಲ್ಪ ದಿನಗಳ ಕಾಲ ಸಮಸ್ಯೆಯಾಗದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ನೋಡಿಕೊಂಡಿದ್ದಾರೆ.
ಸದ್ಯ ಕೆರೆಯಿಂದ ಪ್ರತಿ ದಿನವೂ 1.4 ಎಂಸಿಎಫ್ಟಿ ನೀರು ಸರಬರಾಜು ಮಾಡಲಾಗುತ್ತಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೆರೆಯಿಂದ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 800 ಕೊಳವೆ ಬಾವಿಗಳಿಂದ 6 ಎಂಸಿಎಫ್ಟಿ ನೀರು ಸಿಗುತ್ತಿದೆ. ಪ್ರತಿ ದಿನವೂ ಕೆರೆ ಹಾಗೂ ಕೊಳವೆ ಬಾವಿ ಸೇರಿ ಸುಮಾರು 7 ಎಂಸಿಎಫ್ಟಿ ನೀರು ಕೊಡಲಾಗುತ್ತಿದೆ. ಬೇಸಿಗೆ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಲ ಮೂಲಗಳು ಬರಿದಾಗುತ್ತಿದ್ದು, ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಲೇ ಸಾಗಿದೆ.
ನಗರದಲ್ಲಿ ಪ್ರತಿ ದಿನವೂ 60ರಿಂದ 70 ಎಂಎಲ್ಡಿ ನೀರಿಗೆ ಬೇಡಿಕೆ ಇದ್ದು, ಪ್ರಸ್ತುತ ಅದರಲ್ಲಿ ಅರ್ಧದಷ್ಟು ಪ್ರಮಾಣದಲ್ಲೂ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಭಾಗಗಳಲ್ಲಿ ವಾರಕ್ಕೆ ಎರಡರಿಂದ ಮೂರು ಬಾರಿ, ಮತ್ತೆ ಕೆಲವು ಬಡಾವಣೆಗಳಲ್ಲಿ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಹರಿಸುವ ಅವಧಿಯನ್ನೂ ಕಡಿಮೆ ಮಾಡಲಾಗಿದೆ. ಐದಾರು ಗಂಟೆಗಳ ಕಾಲ ನೀರು ಬಿಡುವ ಕಡೆಗಳಲ್ಲಿ ಮೂರುನಾಲ್ಕು ಗಂಟೆಗಳಿಗೆ ಇಳಿಸಲಾಗಿದೆ.
ನೀರು ಬಿಡುವ ಸಮಯ ಕಡಿಮೆಯಾಗಿದ್ದು, ತೊಟ್ಟಿಗಳನ್ನೂ ತುಂಬಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರುವ ನೀರು ಮನೆ ಬಳಕೆಗೆ ಸಾಲುತ್ತಿಲ್ಲ. ಇನ್ನೂ ಮಾರ್ಚ್ ತಿಂಗಳಲ್ಲೇ ಇಂತಹ ಸ್ಥಿತಿಯಾದರೆ ಮುಂದೇನು? ಎಂದು ಗೃಹಿಣಿ ರಮಾ ಆತಂಕ ವ್ಯಕ್ತಪಡಿಸಿದರು.
ಹೇಮಾವತಿ ನಾಲೆ ಸುತ್ತ ನಿಷೇಧಾಜ್ಞೆ
ಹೇಮಾವತಿ ಜಲಾಶಯದಿಂದ ಮಂಗಳವಾರ ನೀರು ಹರಿಸುತ್ತಿದ್ದು ತುಮಕೂರು ತಿಪಟೂರು ಗುಬ್ಬಿ ತುರುವೇಕೆರೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ಹೇಮಾವತಿ ನಾಲೆಯ ಉದ್ದಕ್ಕೂ 100 ಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 12ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತುಮಕೂರು ಶಾಖಾ ನಾಲೆ 70 ಕಿ.ಮೀ.ನಿಂದ 145 ಕಿ.ಮೀ ವರೆಗೆ ನೀರು ಹರಿಸಲಾಗುತ್ತದೆ. ನಾಲೆಯ ಭಾಗದ ಜನರು ಅನಧಿಕೃತವಾಗಿ ಜಮೀನು ತೋಟಗಳಿಗೆ ನೀರು ಹರಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಕೆರೆಗಳಿಗೆ ತುಂಬಿಸುವುದನ್ನು ಹೊರತುಪಡಿಸಿದರೆ ಕೃಷಿಗೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.