ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ಸಂಪಾದನೆಗಾಗಿ ಪಿಎಚ್‌.ಡಿ: ಕಳವಳ

Published 30 ಮಾರ್ಚ್ 2024, 4:42 IST
Last Updated 30 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ತುಮಕೂರು: ‘ಕೇವಲ ಹಣ ಸಂಪಾದನೆಗಾಗಿ, ಉನ್ನತ ಪದವಿ ಪಡೆಯಲು ಪಿ.ಎಚ್‍ಡಿ ಮಾಡುತ್ತಿದ್ದೇವೆ. ಸಂಶೋಧನೆಗಳಲ್ಲಿ ಕೃತಿಚೌರ್ಯ, ಸ್ವಜನಪಕ್ಷಪಾತ ಹೆಚ್ಚಾಗುತ್ತಿದೆ’ ಎಂದು ವಿಶ್ವವಿದ್ಯಾಲಯ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಕಳವಳ ವ್ಯಕ್ತಪಡಿಸಿದರು.

ವಿ.ವಿಯಲ್ಲಿ ಗುರುವಾರ ಕಲಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಆಯೋಜಿಸಿದ್ದ ‘ವಿದ್ವತ್ ಬರವಣಿಗೆ ಮತ್ತು ಸಂಶೋಧನೆಯಲ್ಲಿ ನೈತಿಕತೆ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ‘ಅಧ್ಯಾಪಕರಿಗೆ ಸಂಶೋಧನೆಯ ಮಹತ್ವದ ಅರಿವು ಮೂಡಿಸುವ ಕಾರ್ಯಾಗಾರ ಆಯೋಜಿಸಬೇಕು’ ಎಂದು ಸಲಹೆ ಮಾಡಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಟೇಶ್ವರಲು, ‘ನೈತಿಕತೆ ಸಂಶೋಧನೆಯ ಬೆನ್ನೆಲುಬು ಇದ್ದಂತೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಸಂಶೋಧನೆ ಕ್ಷೇತ್ರದಲ್ಲಿ ನೈತಿಕತೆ ಕುಸಿಯುತ್ತಿದೆ. ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದ ಮುಖ್ಯ ಉದ್ದೇಶ ಮರೆತಿವೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ವಿಫಲವಾಗುತ್ತಿವೆ’ ಎಂದು ವಿಷಾದಿಸಿದರು.

ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಬಿ.ಟಿ.ಸಂಪತ್‌ ಕುಮಾರ್‌, ‘ಸಂಶೋಧನಾ ಕ್ಷೇತ್ರದ ಬಗ್ಗೆ ಜ್ಞಾನ ಮತ್ತು ಅರಿವಿನ ಕೊರತೆಯಿಂದ ಗುಣಮಟ್ಟದ ಲೇಖನ ಪ್ರಕಟಿಸಲು ವಿಫಲರಾಗುತ್ತಿದ್ದೇವೆ. ಸಂಶೋಧನೆಯ ವಿಷಯಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಉದ್ದೇಶದ ಕಾರ್ಯಾಗಾರ ಆಯೋಜಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಎಸ್‌.ಸುಮಾದೇವಿ, ಸಹಾಯಕ ಪ್ರಾಧ್ಯಾಪಕ ಕೆ.ವಿ.ಸಿಬಂತಿ ಪದ್ಮನಾಭ, ಉಪನ್ಯಾಸಕಿ ಹರ್ಷಿತಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT