ಗುಬ್ಬಿ: ಪಟ್ಟಣ ಪಂಚಾಯಿತಿಯ ಸದಸ್ಯರು ಕಟ್ಟಿಕೊಂಡಿದ್ದ ಮೋರಿ, ರಾಶಿ ಬಿದ್ದಿದ್ದ ಕಸದ ರಾಶಿಗೆ ಮುಕ್ತಿ ಕಾಣಿಸಲು ಶುಕ್ರವಾರ ಪ್ರಯತ್ನಿಸಿದರು.
ಅನೈರ್ಮಲ್ಯದಿಂದ ಪಟ್ಟಣದಲ್ಲಿ ರೋಗ ಭೀತಿ ಆವರಿಸಿತ್ತು. ಶಾಸಕರ ಪತ್ನಿ ಭಾರತಿ ಶ್ರೀನಿವಾಸ್ ಜತೆ ಸೇರಿದ ಸದಸ್ಯರು ತಾವೇ ಸ್ವಚ್ಛತೆಗೆ ಮುಂದಾದರು. ಈ ಸಂದರ್ಭ ಸ್ಥಳಕ್ಕೆ ಬಂದ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ವಿರುದ್ಧ ಹರಿಹಾಯ್ದರು.
ಖಾಲಿ ನಿವೇಶನಗಳು ತ್ಯಾಜ್ಯ ಸಂಗ್ರಹ ತೊಟ್ಟಿಗಳಾಗುತ್ತಿವೆ. ಮಾಲೀಕರು ಬೇಲಿ, ಕಸವನ್ನು ತೆಗೆದು ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಬೇಕು. ಖಾಲಿ ನಿವೇಶನಗಳ ಮಾಲೀಕರಿಗೆ ಡಂಡ ವಿಧಿಸುವಂತೆ ಸೂಚಿಸಿದರು.
ಬಸ್ನಿಲ್ದಾಣದ ಸಮೀಪ ನಿರ್ಮಾಣವಾಗಿ ನೆನೆಗುದಿಗೆ ಬಿದ್ದಿರುವ ಹೂ, ಹಣ್ಣು, ತರಕಾರಿ ಮಳಿಗೆಗಳು ಅನಧಿಕೃತವಾಗಿ ಕೆಲವೇ ವ್ಯಕ್ತಿಗಳ ಕೈವಶವಾಗಿವೆ. ಪಟ್ಟಣ ಪಂಚಾಯಿತಿ ಕಟ್ಟಡವನ್ನು ಬಾಡಿಗೆ ನೀಡಿಲ್ಲದಿದ್ದರೂ; ಅತಿಕ್ರಮಿಸಿಕೊಂಡ ವರ್ತಕರು ದಾಸ್ತಾನು ಮಳಿಗೆಗಳನ್ನಾಗಿ ಪರಿವರ್ತಿಸಿಕೊಂಡಿದ್ದನ್ನು ಗಮನಿಸಿದ ಅಧಿಕಾರಿಗಳು ಮತ್ತು ಸದಸ್ಯರು ಬೀಗ ಒಡೆದು ದಾಸ್ತಾನು ಮಾಡಿದ್ದ ಸರಕುಗಳನ್ನು ವಶಕ್ಕೆ ಪಡೆದರು.
ಮಳಿಗೆ ಕಟ್ಟಡದಲ್ಲಿ ಅನುಮತಿ ಪಡೆಯದೆ ಟೀ ಅಂಗಡಿ ನಡೆಸುತ್ತಿದ್ದ ವ್ಯಾಪಾರಿಯನ್ನು ಪೊಲೀಸರ ವಶಕ್ಕೆ ಕೊಡಲಾಯಿತು ಮತ್ತು ಇತರ ಕಟ್ಟಡಗಳನ್ನು ಅತಿಕ್ರಮಿಸಿದವರ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸದಸ್ಯರು ತಾಕೀತು ಮಾಡಿದರು. ಸದಸ್ಯರಾದ ಕೃಷ್ಣವೇಣಿ, ತ್ರಿವೇಣಿ, ಪ್ರೇಮಾ, ನರಸಿಂಹಮೂರ್ತಿ, ಜಿ.ಸಿ.ನರಸಿಂಹಮೂರ್ತಿ, ಕುಮಾರ್, ಮುಖಂಡರಾದ ಚನ್ನಬಸವಯ್ಯ, ಡಿ.ರಘು ಇತರರು ಪಾಲ್ಗೊಂಡಿದ್ದರು.