ಕುಣಿಗಲ್: ವಿವಾಹವಾಗಿ ನಾಲ್ಕು ವರ್ಷ ಸಂಸಾರ ನಡೆಸಿದ ನಂತರ ಬೇರೆ ಜಾತಿ ಎನ್ನುವ ಕಾರಣ ಒಡ್ಡಿ ಹೆಂಡತಿಯನ್ನು ದೂರ ಮಾಡಿದ ಮಹಿಳೆಯೊಬ್ಬರು ನಾಲ್ಕು ದಿನಗಳಿಂದ ಉತರಿದುರ್ಗ ಹೋಬಳಿಯ ಸಿದ್ದೆಮಣೆಪಾಳ್ಯದ ಗಂಡನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಲ್ಲೂಕಿನ ಬೋರೆಗೌಡನಪಾಳ್ಯದ ರಾಧಾ (ವಕ್ಕಲಿಗ) ಅವರು ಪಕ್ಕದ ಸಿದ್ದೆಮಣೆಪಾಳ್ಯದ ಉಮೇಶ್ (ಬಲಜಿಗ) ನಡುವೆ ಏಳು ವರ್ಷಗಳ ಹಿಂದೆ ಪ್ರೇಮ ವಿವಾಹ ಮಾಡಿಕೊಂಡು, ಎರಡೂ ಕಡೆಯವರ ವಿರೋಧ ವ್ಯಕ್ತ ಪಡಿಸಿದ ಕಾರಣ ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ವಾಸ ಮಾಡುತ್ತಿದ್ದರು. 2013ರಲ್ಲಿ ಉಮೇಶ್ ತಂದೆ ನರಸಯ್ಯ ನಿಧನರಾದ ಸಮಯದಲ್ಲಿ ಸ್ವಗ್ರಾಮಕ್ಕೆ ಬಂದ ಉಮೇಶ್ ಮತ್ತೆ ಪತ್ನಿ ರಾಧಾ ಬಳಿಗೆ ಹೋಗಿಲ್ಲ.
ಗಂಡನಿಗಾಗಿ ರಾಧಾ ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ ಪರಿಣಾಮ ರಾಜಿ ಸಂಧಾನಗಳು ನಡೆದರೂ ಪರಿಹಾರ ಕಾಣದೆ ಸ್ವಾಧರ್ ಕೇಂದ್ರದಲ್ಲಿ ಇದ್ದರು.
ಇದೇ 24ರಂದು ಮಹಿಳಾ ರಕ್ಷಣಾಧಿಕಾರಿ ರಜನಿ ಮತ್ತು ಸಿಬ್ಬಂದಿ ರಾಧಾ ಅವರನ್ನು ಪತಿ ಉಮೇಶ್ ಅವರ ಸಿದ್ದೆಮಣೆಪಾಳ್ಯದ ಮನೆಗೆ ಕರೆತಂದು ಬಿಟ್ಟುಹೋಗಿದ್ದಾರೆ. ಅಧಿಕಾರಿಗಳು ಹೋಗುವವರೆಗೂ ಸುಮ್ಮನಿದ್ದು ನಂತರ ಉಮೇಶ್ ಕುಟುಂಬದವರು ರಾಧಾ ಮನೆಯಲ್ಲಿ ಇರಕೂಡದು ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಗಾರರಿಗೆ ವಿವರಿಸಿದರು.
ಮೊದಲಿಗೆ ಮನೆಯೊಳಗೆ ಸೇರಿದ್ದೆ ತಪ್ಪು ಎಂಬ ಭಾವನೆಯಿಂದ ಉಪಟಳ ನೀಡಿದರು. ಮನೆಯಿಂದ ಆವರಣಕ್ಕೆ ಬಂದಾಗ ಮನೆಯೊಳಗಿಂದ ಬೀಗ ಜಡಿದ ಕಾರಣ ಆವರಣದಲ್ಲಿ ಇರಬೇಕಾಯಿತು. ಬುಧುವಾರ ಆಹಾರ ನೀಡಲು ಬಂದ ಅಕ್ಕಪಕ್ಕದ ಮನೆಯವರಿಗೆ ನಿಂಧಿಸಿದರು. ಕಾರಣ ಅವರು ಸಹಾಯ ಮಾಡುವುದನ್ನು ನಿಲ್ಲಿಸಿದರು.
ಆದ್ದರಿಂದ ಮತ್ತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮೂಕಾಂಬಿಕಾ, ಮಹಿಳಾ ರಕ್ಷಣಾಧಿಕಾರಿ ರಜನಿ ಬಂದು ಪರಿಸ್ಥಿತಿಯನ್ನು ಅವಲೋಕಿಸಿ, ಅಂಗನವಾಡಿ ಕೇಂದ್ರದ ಸಹಾಯಕಿ ರಮಾಮಣಿ ಮೂಲಕ ಊಟ, ತಿಂಡಿಯ ವ್ಯವಸ್ಥೆ ಮಾಡಿದರು. ರಾತ್ರಿ ಅವರ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಿದ್ದಾರೆ ಎಂದು ರಾಧಾ ಹೇಳಿದರು.
ಬುಧುವಾರ ನಡೆದ ರಾಜಿ ಸಂಧಾನದ ಸಭೆಯಲ್ಲಿ ಊರಿನ ಪ್ರಮುಖರ ಸಭೆಯಲ್ಲಿ ತೀವ್ರ ಚರ್ಚೆ ನಡೆದ ಬಳಿಕ ಉಮೇಶ್ ಅವರ ತಾಯಿ, ಅಣ್ಣ– ಅತ್ತಿಗೆ ಮಕ್ಕಳು ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರೊಂದಿಗೆ ಮಾತನಾಡಿದ ರಾಧಾ, ‘ಪತಿಯೊಂದಿಗೆ ಬಾಳಲು ಬಂದಿದ್ದೇನೆ. ಅವರಿಗಾಗಿ ಕಾಯುತ್ತೇನೆ’ ಎಂದು ತಿಳಿಸಿದ್ದಾರೆ. ಪತಿ ಉಮೇಶ್ ಮಾತನಾಡಿ, ‘ನಮ್ಮ ಮದುವೆ ಬಲವಂತದಿಂದ ಆಗಿದೆ. ರಾಧಾ ಅವರೊಂದಿಗೆ ಸಾಮರಸ್ಯದ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ. ಬಿಡುಗಡೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನ್ಯಾಯಾಲಯದ ತೀರ್ಪಿಗೆ ಬದ್ಧನಾಗಿರುತ್ತೇನೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.