ತುಮಕೂರು: ‘ಮಹಿಳಾ ಜೈಲಿನಲ್ಲಿ ಬೇಕರಿ ಉತ್ಪನ್ನ ತಯಾರಿಸುವ ಘಟಕವನ್ನು ಸ್ಥಾಪಿಸಲಾಗುವುದು. ಬೇಕರಿ ತಿನಿಸುಗಳನ್ನು ಮಹಿಳಾ ಕೈದಿಗಳೇ ತಯಾರಿಸಲಿದ್ದು, ಒಂದು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ’ ಎಂದು ಬಂದಿಖಾನೆಯ ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣರಾವ್ ಹೇಳಿದರು.
ಬುಧವಾರ ನಗರದಲ್ಲಿರುವ ಮಹಿಳಾ ಜೈಲಿನಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬೆಂಗಳೂರಿನ ಮಹಾತ್ಮಗಾಂಧಿ ಗ್ರಾಮೀಣ ಮತ್ತು ಇಂಧನ ಅಭಿವೃದ್ಧಿ ಸಂಸ್ಥೆಯು ಸೋಲಾರ್ ವಿದ್ಯುತ್ ಆಧಾರಿತ ಹೊಲಿಗೆ ಯಂತ್ರ ಕಲ್ಪಿಸಿದ್ದು, ಒಂದು ವಾರದಿಂದ ಮಹಿಳಾ ಕೈದಿಗಳು ತರಬೇತಿ ಪಡೆದಿದ್ದಾರೆ. ಅವರೇ ಪರಿಸರ ಸ್ನೇಹಿ ಬ್ಯಾಗ್, ಕರಕುಶಲ ವಸ್ತುಗಳನ್ನು ತಯಾರಿಸಿದ್ದಾರೆ’ ಎಂದು ತಿಳಿಸಿದರು.
‘ಜೈಲಿನಲ್ಲಿ ತಯಾರಿಸುವ ಬ್ಯಾಗ್ಗಳು ಉತ್ತಮವಾಗಿದ್ದು, ಈಗಷ್ಟೇ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಬೆಲೆ ನಿಗದಿಪಡಿಸಿ ಮಾರುಕಟ್ಟೆ ರೂಪಿಸಲಾಗುವುದು’ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂಥ್, ಬಂದಿಖಾನೆ ಸೂಪರಿಂಟೆಂಡೆಂಟ್ ಲತಾ ಇದ್ದರು.