ಗುಬ್ಬಿ: ದ್ವೇಷ, ಅಸೂಯೆ ದೂರವಿಟ್ಟ ಮನುಷ್ಯನಿಂದ ಮಾತ್ರ ಧರ್ಮ ಜಾಗೃತಿ ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠಾಧ್ಯಕ್ಷ ರೇಣುಕ ವೀರ ಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಈಚೆಗೆ ಜರುಗಿದ ದುರ್ಗಾಪರಮೇಶ್ವರಿ ನೂತನ ವಿಗ್ರಹ ಪ್ರತಿಷ್ಠಾಪನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ಜಾತಿ ಬೇಧವಿಲ್ಲದೆ ವಿವಿಧ ರೂಪದಲ್ಲಿ ದೇವರ ಆರಾಧಿಸುವ ಮಾನವ ಧರ್ಮ ಜಗತ್ತಿಗೆ ಶಾಂತಿ ತರುತ್ತದೆ. ಸಹಬಾಳ್ವೆ ಎಂಬ ನೀತಿ ಪ್ರತಿವ್ಯಕ್ತಿ ಜೀವನದಲ್ಲಿ ಅಳವಡಿಕೆಯಾದರೆ ಸಾರ್ಥಕತೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮದೇ ವೈಶಿಷ್ಟತೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಮುನ್ನಡೆ ದೇಶದ ಅಭಿವೃದ್ಧಿಯ ಸಂಕೇತ ಎಂದರು.
ಸಿದ್ದರಬೆಟ್ಟ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ದೊಡ್ಡಗುಣಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಈಚೆಗೆ ನಿಧನರಾದ ಹಿರಿಯ ರಂಗಭೂಮಿ ಕಲಾವಿದ ಬಸವರಾಜ್ ಗುಡಗೇರಿ, ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಜಿಪಂ ಸದಸ್ಯ ಪಿ.ಬಿ. ಚಂದ್ರಶೇಖಬಾಬು, ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷ ಕೆ.ಎ.ರಂಗೇಗೌಡ, ಕೊಡಿಯಾಲ ಕೃಷ್ಣಮೂರ್ತಿ, ಕೆ.ಟಿ.ರಂಗಸ್ವಾಮಿ, ತ್ಯಾಗರಾಜು ಇನ್ನಿತರರು ಉಪಸ್ಥಿತರಿದ್ದರು.