ತುರುವೇಕೆರೆ: ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೊಡಗೀಹಳ್ಳಿ ಹೊರ ವಲಯದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಎಡಬಿಡದೆ ಸುರಿಯುತ್ತಿರುವ ಮಳೆಗೆ ಕಟ್ಟಡ ಕುಸಿಯಬಹುದು ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹೊಸ ಕಟ್ಟಡಕ್ಕೆ ಹೊಂದಿಕೊಂಡಂತೆ ಕೊಡಗೀಹಳ್ಳಿ ಹೊರವಲಯದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ವಸತಿ ನಿಲಯದ ಕಟ್ಟಡ ಕಾಮಗಾರಿಯ ಅಂದಾಜು ವೆಚ್ಚ ರೂ 1 ಕೋಟಿ. ಆದರೆ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿಲ್ಲ ಎನ್ನುವುದು ಮೇಲ್ನೋಟಕ್ಕೇ ಕಂಡು ಬರುತ್ತಿದೆ.
ಇಷ್ಟು ದೊಡ್ಡ ಕಟ್ಟಡ ಕಟ್ಟಲು ಸುಭದ್ರವಾದ ಅಡಿಪಾಯ ಹಾಕಬೇಕು. ಆದರೆ ಕೇವಲ 3 ಅಡಿ ಆಳ ಅಗೆದು ಅಡಿಪಾಯ ಹಾಕಲಾಗಿದೆ. ಅಡಿಪಾಯದ ಮೇಲೆ ಸಿಮೆಂಟ್, ಕಬ್ಬಿಣದ ಸರಳು ಹಾಕಿ ಕಾಂಕ್ರೀಟ್ ಸಹ ಹಾಕಿಲ್ಲ. ಅಲ್ಲಲ್ಲಿ ಪಾಯವೇ ಕಿತ್ತು ಬಂದಿದ್ದು ತೇಪೆ ಹಾಕಲಾಗಿದೆ. ಇಡೀ ಕಟ್ಟಡ ಕಾಮಗಾರಿಗೆ ಅತ್ಯಂತ ಕಳಪೆ ಮಣ್ಣು ಮಿಶ್ರಿತ ಮರಳು ಬಳಸಲಾಗಿದೆ. ಸಿಮೆಂಟ್ ಪ್ರಮಾಣವನ್ನು ಸಹ ಅನುಸೂಚಿತ ರೀತಿಯಲ್ಲಿ ಬಳಸಿಲ್ಲ. ಜೊತೆಗೆ ಕಟ್ಟಡವನ್ನು ಕ್ಯೂರಿಂಗ್ ಮಾಡಿಲ್ಲ ಎಂಬ ಅರೋಪಗಳು ಕೇಳಿ ಬಂದಿವೆ. ‘ಇಂಥ ಕಳಪೆ ಕಟ್ಟಡದಲ್ಲಿ ನಿರಾತಂಕವಾಗಿ ಇರುವುದು ಹೇಗೆ?’ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸುತ್ತಾರೆ.
ಈ ವಸತಿ ನಿಲಯ ಕಟ್ಟಡಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿಯೇ ರೂ 1 ಕೋಟಿ ಅನುದಾನ ಒದಗಿಸಿದೆ. ಬೆಂಗಳೂರಿನ ರೈಟ್ಸ್ ಕಂಪೆನಿ ಎಂಬ ಸಂಸ್ಥೆಯು ಕಾಮಗಾರಿಯ ಹೊಣೆ ಹೊತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಉಪ ಕಾರ್ಯಪಾಲಕ ಎಂಜಿನಿಯರ್ ದಯಾನಂದ್ ತಿಳಿಸಿದ್ದಾರೆ.
ಪಾಲಿಟೆಕ್ನಿಕ್ ಕಾಲೇಜ್ ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದ ಕಾರಣ ಇಲ್ಲಿ ಜನಸಂಚಾರ ವಿರಳ. ಈ ಕಾಮಗಾರಿಯ ಮೇಲೆ ಸ್ಥಳೀಯವಾಗಿ ಲೋಕೋಪಯೋಗಿ ಇಲಾಖೆಯೂ ಸೇರಿದಂತೆ ಯಾವ ಇಲಾಖೆಗೂ ನಿಯಂತ್ರಣವಿಲ್ಲ, ಈ ಕಾಮಗಾರಿಯ ಬಗ್ಗೆ ಯಾರಲ್ಲೂ ಮಾಹಿತಿಯೂ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
‘ಕಟ್ಟಡ ನಿರ್ಮಾಣಕ್ಕೆ ಕಳಪೆ ಸಾಮಾಗ್ರಿ ಬಳಸಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ತಾಂತ್ರಿಕ ಶಿಕ್ಷಣ ಮಂಡಳಿಯು ಕೂಡಲೇ ಲೋಕೋಪಯೋಗಿ ಇಲಾಖೆಗೆ ಈ ಕಾಮಗಾರಿಯ ಮೇಲ್ವಿಚಾರಣೆಯನ್ನು ವಹಿಸಿಕೊಡಬೇಕು. ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಬೇಕು’ ಎಂದು ಕೊಡಗೀಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.