ಉಡುಪಿ: ಉಡುಪಿಯ ಟೈಗರ್ ಎಂದೇ ಪ್ರಸಿದ್ಧರಾಗಿದ್ದ ಹುಲಿಕುಣಿತ ವೇಷಧಾರಿ ಅಶೋಕ್ರಾಜ್ ಕಾಡಬೆಟ್ಟು (56) ಗುರುವಾರ ನಿಧನರಾದರು.
ಈಚೆಗೆ ಹುಲಿವೇಷ ಕುಣಿತ ಕಾರ್ಯಕ್ರಮವೊಂದರಲ್ಲಿ ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅಶೋಕ್ರಾಜ್ ಕಾಡಬೆಟ್ಟು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹುಲಿಕುಣಿತ ತಂಡ ಕಟ್ಟಿಕೊಂಡು ಎಲ್ಲೆಡೆ ಪ್ರದರ್ಶನ ನೀಡುತ್ತಿದ್ದ ಅಶೋಕ್ ರಾಜ್ ಕಾಡಬೆಟ್ಟು ಕೃಷ್ಣಮಠದಲ್ಲಿ ಅಷ್ಟಮಿಯ ಸಂದರ್ಭ ವಿಶಿಷ್ಟ ರೀತಿಯಲ್ಲಿ ಹುಲಿ ಕುಣಿತ ಪ್ರದರ್ಶಿಸಿ ಎಲ್ಲರನ್ನೂ ರಂಜಿಸುತ್ತಿದ್ದರು. ಮೂರು ದಶಕಗಳಿಗೂ ಹೆಚ್ಚುಕಾಲ ಹುಲಿ ಕುಣಿತದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಅಶೋಕ್ರಾಜ್ ಅವರದ್ದು.
ಹುಲಿಕುಣಿತ ತರಬೇತಿಯನ್ನೂ ನೀಡುವ ಮೂಲಕ ನೂರಾರು ಮಂದಿಗೆ ಕರಾವಳಿಯ ವಿಶಿಷ್ಟ ಕಲೆಯನ್ನು ಕಲಿಸಿದ್ದರು. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.