ಉಡುಪಿ: ಒತ್ತಡದ ವೃತ್ತಿಯಲ್ಲಿರುವ ಆಟೊ ರಿಕ್ಷಾ ಚಾಲಕರು ಹಾಗೂ ಮಾಲೀಕರು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ವರ್ಷಕ್ಕೊಮ್ಮೆ ಕೌಟುಂಬಿಕ ಸಮಾವೇಶ ಮಾಡಲಾಗುವುದು ಎಂದು ನಗರಸಭಾ ಸದಸ್ಯ ಮಹೇಶ್ ಠಾಕೂರ್ ಹೇಳಿದರು.
ಉಡುಪಿ ಶಾರದಾ ಆಟೊ ಯೂನಿಯನ್ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ಎಂಟನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಿಕ್ಷಾ ಓಡಿಸುವವರುದುಡಿಮೆ ಮಾಡುವುದರಲ್ಲೇ ಹೆಚ್ಚಿನ ಆಯುಷ್ಯ ಕಳೆಯುತ್ತಾರೆ. ಮಾನಸಿಕವಾಗಿ ಉಲ್ಲಸಿತರಾಗಲು ಕೌಟುಂಬಿಕ ಸಮಾವೇಶ ಆಯೋಜನೆ ಅಗತ್ಯವಿದೆ ಎಂದರು.
ಸಂಘಟನೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ರಿಕ್ಷಾ ಚಾಲಕರು ಹಾಗೂ ಮಾಲೀಕರು ಮಾದರಿಯಾಗಿದ್ದಾರೆ. ಸಂಘಟನೆ ಕಟ್ಟುವುದು ಸುಲಭ. ಆದರೆ, ಸಮಸ್ಯೆಗಳು ಬಾರದಂತೆ ಬೆಳೆಸುವುದು ಕಠಿಣವಾದ ಕೆಲಸ. ನೆರವು ಪಡೆದವರು ಸಂಘಟನೆಗಾಗಿ ದುಡಿಯಬೇಕು ಎಂದು ಸಂಘಟನೆಯ ಗೌರವಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ರಿಕ್ಷಾ ಚಾಲಕರು ಬಹುಕಾಲ ರಸ್ತೆಯಲ್ಲೇ ಇರುವುದರಿಂದ ಅಫಘಾತಗಳು ಸಂಭವಿಸಿದಾಗ ಜೀವರಕ್ಷಕರ ಹಾಗೆ ನೆರವಿಗೆ ಬರುತ್ತಾರೆ. ವೈಯುಕ್ತಿಕ ಜೀವನದ ಬಗ್ಗೆ ಮುತುವರ್ಜಿ ವಹಿಸಬೇಕು. ಆರೋಗ್ಯ ವಿಮೆ, ವಾಹನಗಳ ದಾಖಲಾತಿ ಪತ್ರಗಳನ್ನು ಕ್ರಮಬದ್ಧವಾಗಿ ಇರಿಸಿಕೊಂಡು ದುಡಿಮೆಯ ನಡುವೆಯೂ ಸಂಸಾರದ ಜೊತೆ ಕಾಲ ಕಳೆಯಬೇಕು ಎಂದು ಸಮಾಜ ಸೇವಕ ವಿಷು ಶೆಟ್ಟಿ ಅಂಬಲಪಾಡಿ ಸಲಹೆ ನೀಡಿದರು.
ಅಧ್ಯಕ್ಷ ಚಂದ್ರಶೇಖರ್ ಬನ್ನಂಜೆ ಮಾತನಾಡಿ, ರಿಕ್ಷಾ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳಾದ ಅವೈಜ್ಞಾನಿಕ ವಾಹನ ವಿಮೆ ನೀತಿ, ಪರ್ಮಿಟ್ ಸಮಸ್ಯೆಗಳು, ಅವ್ಯವಸ್ಥಿತ ನಿಲ್ದಾಣಗಳು, ಅಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳಿಂದ ವಂಚಿತರಾಗಿರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ರಘುನಂದ ಪರ್ಕಳ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸತೀಶ್ ಪೂಜಾರಿ ಲೆಕ್ಕಪತ್ರ ವರದಿ ಓದಿದರು. ಜಿಲ್ಲಾ ಆಟೊ ಚಾಲಕ, ಮಾಲೀಕ ಒಕ್ಕೂಟದ ಕಾರ್ಯಾಧ್ಯಕ್ಷರಾದ ಸುರೇಶ ಅಮೀನ್ ಮಣಿಪಾಲ, ಸಂಘಟನೆಯ ಪ್ರಮುಖರಾದ ಸುರೇಶ ಶೆಟ್ಟಿಗಾರ್, ಸುರೇಶ, ಅಬ್ದುಲ್ ಹಮೀದ್, ದಾಮೋದರ್ ಆಚಾರ್ಯ, ಪ್ರಭಾಕರ್ ಪೂಜಾರಿ, ಮ್ಯಾಕ್ಸಿಮ್ ಮೆನೆಜಸ್, ಶಂಕರ್ ಅಮೀನ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.