ಕೋಟ(ಬ್ರಹ್ಮಾವರ): ಉಡುಪಿ ಜಿಲ್ಲೆಯಲ್ಲಿ ಮೊಗವೀರ ಯುವ ಸಂಘಟನೆ ರಕ್ತದಾನದ ಮೂಲಕ ಯುವ ಸಮುದಾಯದ ರಕ್ತದಾನಿಗಳಲ್ಲಿ ಸಂಚಲ ಮೂಡಿಸಿದೆ ಎಂದು ಕೋಟ ಮಣೂರಿನ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಕೋಟ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಉಡುಪಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಕೋಟ ಮೊಗವೀರ ಯುವ ಸಂಘ, ಮಹಿಳಾ ಘಟಕ, ಜಿಲ್ಲಾಡಳಿತ, ಮಣಿಪಾಲ ಕೆ.ಎಂ.ಸಿ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನದ ಮಹತ್ವ ಹೆಚ್ಚಾಗಿ ತಿಳಿಯುವುದು ಅಪಘಾತದ ಸಂದರ್ಭದಲ್ಲಿ. ಇದನ್ನು ನೆನಪಿಟ್ಟುಕೊಂಡು ರಕ್ತದಾನ ಮಾಡಬೇಕು. ಹಿಂದೆ ರಕ್ತದಾನ ಮಾಡಲು ಜನಸಾಮಾನ್ಯರು ಹಿಂಜರಿಯುತ್ತಿದ್ದರು. ಅದನ್ನು ಮೊಗವೀರ ಸಂಘ ತೊಡೆದು ಹಾಕಿ ರಕ್ತದಾನಿಗಳನ್ನು ಹೆಚ್ಚಿಸಿ ಕ್ರಾಂತಿಕಾರಿ ಬೆಳವಣಿಗೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ರಕ್ತದಾನದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು. ಆಗ ಮಾತ್ರ ಪ್ರತಿಯೋರ್ವ ವ್ಯಕ್ತಿ ರಕ್ತದಾನದ ಮಹತ್ವ ತಿಳಿದು ರಕ್ತದಾನ ಮಾಡುತ್ತಾನೆ ಎಂದು ಹೇಳಿದರು.
ಕೋಟ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಗಿರೀಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಘಟಕದ ಅಧ್ಯಕ್ಷ ವಿನಯ ಕರ್ಕೆರ ಮಲ್ಪೆ, ಕಾರ್ಯದರ್ಶಿ ಸತೀಶ್ ಮರಕಾಲ ಸಾಲಿಗ್ರಾಮ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಾಂಚನ್, ಎಮ್.ಎಸ್ ಸಂಜೀವ, ಕೋಟ ಘಟಕದ ನಿಕಟಪೂರ್ವ ಅಧ್ಯಕ್ಷ ಶಿವರಾಮ್ ಕೆ.ಎಂ, ರಮೇಶ್ ವಿ ಕುಂದರ್, ಕಾರ್ಯದರ್ಶಿ ಯೋಗೇಂದ್ರ ತಿಂಗಳಾಯ, ಜಿಲ್ಲಾ ಸಮಿತಿಯ ರಾಜು ಅಮೀನ್, ಮಹಿಳಾ ಘಟಕದ ಅಧ್ಯಕ್ಷೆ ಗುಲಾಬಿ ದೇವದಾಸ ಬಂಗೇರ, ನಿಕಟ ಪೂರ್ವ ಅಧ್ಯಕ್ಷೆ ಶಾರದ ಆರ್ ಕಾಂಚನ್, ಉದ್ಯಮಿ ಜಯಂತ್ ಅಮೀನ್ ಕೋಡಿ, ಕುಂದಾಪುರ ಘಟಕದ ಸುಧಾಕರ ಕಾಂಚನ್, ದಿವಾಕರ ಮೆಂಡನ್, ಕೆ.ಎಂ.ಸಿ ಮಣಿಪಾಲದ ಡಾ.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ ಘಟಕದ ಕಾರ್ಯದರ್ಶಿ ರಂಜಿತ್ ಕುಮಾರ್ ಸ್ವಾಗತಿಸಿದರು. ಸುರೇಶ್ ಕೆ ಕಾರ್ಯಕ್ರಮ ನಿರೂಪಿಸಿದರು.
ಹೊಸಮುನ್ನುಡಿ
ಉದ್ಯಮಿ ಹಾಗೂ ಕೋಟ ಮಣೂರಿನ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ್ ಸಿ ಕುಂದರ್ ಕೆಲವು ವರ್ಷಗಳಿಂದ ಕೋಟ ಪರಿಸರದಲ್ಲಿ ಪರಿಸರ ಸಂರಕ್ಷಣೆ, ಶೈಕ್ಷಣಿಕ ಸೌಲಭ್ಯ ಹೀಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಈಗಾಗಲೇ ಕೊಡುಗೈ ದಾನಿ ಎಂದೇ ಪ್ರಸಿದ್ಧಿ ಹೊಂದಿದ್ದಾರೆ. ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿಯೂ ರಕ್ತದಾನಿಗಳಿಗೆ ಫೌಂಡೇಶನ್ನ ವತಿಯಿಂದ ಉಚಿತ ಸಸ್ಯ ವಿತರಿಸುವ ಮೂಲಕ ಪರಿಸರ ಜಾಗೃತಿಗೆ ಮುನ್ನುಡಿ ಬರೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.