ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪುರ | ತಾಯಿಯ ಶವದ ಜೊತೆ 3–4 ದಿನ ಕಳೆದಿದ್ದ ಪುತ್ರಿ ತೀವ್ರ ಅಸ್ವಸ್ಥ: ಸಾವು

Published 18 ಮೇ 2024, 19:06 IST
Last Updated 18 ಮೇ 2024, 19:06 IST
ಅಕ್ಷರ ಗಾತ್ರ

ಕುಂದಾಪುರ (ಉಡುಪಿ): ತಾಯಿಯ ಶವದೊಂದಿಗೆ ಅನ್ನ ನೀರು ಇಲ್ಲದೆ ಮೂರ್ನಾಲ್ಕು ದಿನ ಕಳೆದು ತೀವ್ರ ಅಸ್ವಸ್ಥಗೊಂಡಿದ್ದ ಬುದ್ದಿಮಾಂದ್ಯ  ಮಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಶನಿವಾರ ಕುಂದಾಪುರ ತಾಲ್ಲೂಕಿನ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ನಡೆದಿದೆ.

ತಾಯಿ ಜಯಂತಿ ಶೆಟ್ಟಿ (62) ಹಾಗೂ ಪುತ್ರಿ ಪ್ರಗತಿ ಶೆಟ್ಟಿ (32) ಮೃತರು.

ತೀವ್ರ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆದಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿ ಅವರು, ಹುಟ್ಟಿನಿಂದಲೇ ಬುದ್ದಿಮಾಂದ್ಯಳಾಗಿದ್ದ ಪುತ್ರಿ ಪ್ರಗತಿ ಶೆಟ್ಟಿ ಜತೆ ವಾಸವಿದ್ದರು. ಈಚೆಗೆ ಜಯಂತಿ ಶೆಟ್ಟಿ ಅವರ ಕಾಯಿಲೆ ಗಂಭೀರವಾಗಿ ಮೃತಪಟ್ಟಿದ್ದಾರೆ. ಬುದ್ದಿಮಾಂಧ್ಯ ಪುತ್ರಿ ಏನು ಮಾಡಬೇಕು ಎಂದು ತೋಚದೆ ತಾಯಿಯ ಶವದ ಜತೆಗೆ ಮೂರ್ನಾಲ್ಕು ದಿನ ಕಳೆದಿದ್ದಾರೆ.

ಹಗಲು– ರಾತ್ರಿ ನಿರಂತರವಾಗಿ ಮನೆಯಲ್ಲಿ ವಿದ್ಯುತ್ ಉರಿಯುತ್ತಿರುವುದನ್ನು ಹಾಗೂ ಮನೆಯ ಸುತ್ತಲೂ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು, ಶುಕ್ರವಾರ ಕಿಟಕಿ ತೆರೆದು ನೋಡಿದಾಗ ಜಯಂತಿ ಶೆಟ್ಟಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜತೆಗೆ ಮಗಳು ಪ್ರಗತಿ ಶೆಟ್ಟಿ ಕೂಡ ತೀವ್ರ ಅಸ್ವಸ್ಥಗೊಂಡಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಂದಾಪುರ ಠಾಣೆ ಇನ್‌ಸ್ಪೆಕ್ಟರ್ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಮನೆಯ ಬಾಗಿಲು ಒಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಗತಿ ಶೆಟ್ಟಿ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಗತಿ ಶೆಟ್ಟಿ ಶನಿವಾರ ಮೃತಪಟ್ಟಿದ್ದಾರೆ. ತಾಯಿ ಹಾಗೂ ಮಗಳ ಮೃತ ದೇಹಗಳ ಅಂತ್ಯಸಂಸ್ಕಾರ ಹೆಂಗವಳ್ಳಿಯಲ್ಲಿ ನಡೆಸಲಾಯಿತು.

ಜಯಂತಿ ಶೆಟ್ಟಿ ಸ್ನಾನ ಮಾಡಲು ಹೋಗಿದ್ದಾಗ ಕುಸಿದು ಬಿದ್ದು ಮೃತ ಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT