ಹೆಬ್ರಿ: ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಅತ್ಯಂತ ಚಿಕ್ಕ ರಸ್ತೆಯಲ್ಲಿ ಓಡಾಡುತ್ತವೆ. ಎರಡು ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಬೈಕ್ ಹಾಗೂ ಆಟೊ ಚಾಲಕರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಕ್ಕೆಲಗಳಲ್ಲಿ ದೊಡ್ಡಗಾತ್ರದ ಅಂತರ ಇರುವುದರಿಂದ ಸಂಚಾರಕ್ಕೆ ರಸ್ತೆಯಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ ಪೂಜಾರಿ ಹೇಳಿದರು.
ಅವರು ಮಠದಬೆಟ್ಟಿನಲ್ಲಿರುವ ಸೀತಾನದಿ ಸೇತುವೆ ಬಳಿ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆಯವರಿಂದ ತೊಡಕು ಉಂಟಾಗಿರುವ ಹಿನ್ನಲೆಯಲ್ಲಿ ಸಮಾನ ಮನಸ್ಕರ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
₹5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅರಣ್ಯ ಇಲಾಖೆಯವರು ಒಂದು ವೇಳೆ ಕಾಮಗಾರಿ ಮಾಡಲು ಬಿಡದಿದ್ದಲ್ಲಿ ಅನುದಾನ ಹಿಂದೆ ಹೋಗುತ್ತದೆ. ಈ ನಿಟ್ಟಿನಲ್ಲಿ ಪಿಡಬ್ಲ್ಯುಡಿ, ಅರಣ್ಯ ಇಲಾಖೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ರಸ್ತೆ ಬದಿಯಲ್ಲಿರುವ ಒಣ ಮರ ತೆರವುಗೊಳಿಸಬೇಕು ಎಂದು ಶ್ರೀಕಾಂತ ಪೂಜಾರಿ ಆಗ್ರಹಿಸಿದರು.
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಗೌರವ್ ಮಾತನಾಡಿ, ಸ್ಥಳಕ್ಕೆ ಮೇಲಾಧಿಕಾರಿಗಳನ್ನು ಕರೆದುಕೊಂಡು ಬರಲಾಗುವುದು. ಎರಡು ದಿನದೊಳಗೆ ರಸ್ತೆಯ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.
ಪ್ರತಿಭಟನೆ ವೇಳೆ ಆಹವಾಲು ಸ್ವೀಕರಿಸಲು ಅರಣ್ಯ ರಕ್ಷಕ ಬಂದಾಗ ಪ್ರತಿಭಟನಾಕಾರರು ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಬರಬೇಕೆಂದು ಪಟ್ಟು ಹಿಡಿದರು. ಬರದಿದ್ದಲ್ಲಿ ರಸ್ತೆ ತಡೆ ನಡೆಸುತ್ತೇವೆ ಎಂದಾಗ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಾಯಿಸಿದರು.
ಒಂದು ಕಿಲೋಮೀಟರ್ ಸಮಸ್ಯೆ:
ಮಠದಬೆಟ್ಟು ಸೀತಾನದಿ ಸೇತುವೆಯಿಂದ ರಸ್ತೆಯು ಸುಮಾರು ಒಂದು ಕಿಲೋಮೀಟರ್ನಷ್ಟು ತೀರಾ ಇಕ್ಕಟ್ಟಾಗಿದೆ. ಅದೇ ರಸ್ತೆ ಬಗ್ಗೆಯೇ ಪ್ರತಿಭಟನೆ ನಡೆಸಿದ್ದೇವೆ. ಓರೆಕೋರೆ ರಸ್ತೆಯಲ್ಲಿ ಘನವಾಹನಗಳು ಬಂದಾಗ ಸಣ್ಣ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದೆ. ಚಾರದಲ್ಲಿ ಸೇತುವೆ ನಿರ್ಮಾಣ ಹಂತದಲ್ಲಿ ಇರುವುದರಿಂದ ಇದೇ ರಸ್ತೆಯನ್ನು ಮುಖ್ಯರಸ್ತೆಯನ್ನಾಗಿ ಜನರು ಬಳಸುತ್ತಾರೆ ಎಂದು ಕೃಷಿಕ ರಾಜೀವ ಶೆಟ್ಟಿ ಹೇಳಿದರು.
ರಸ್ತೆಯ ಸಮಿಪ ಇರುವ ಯಾವುದೇ ಮರ ಮುಟ್ಟುವುದಿಲ್ಲ. ಕಾಡು ಪ್ರಾಣಿಗಳಿಗೆ ಸಮಸ್ಯೆ ಆಗದಂತೆ ಸಂಜೆ 6 ಗಂಟೆ ಒಳಗಾಗಿ ಕೆಲಸ ನಿಲ್ಲಿಸುತ್ತೇವೆ. ಒಂದು ವಾರ ಸಮಯ ನೀಡಿ ಅಷ್ಟರೊಳಗೆ ಒಂದು ಕಿಲೋಮೀಟರ್ ರಸ್ತೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡಲಾಗುವುದೆಂದು ಗುತ್ತಿಗೆದಾರ ಚಾರ ವಾದಿರಾಜ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.