ಕುಂದಾಪುರ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ಗುಳಗೊಂಡ ಕ್ರಾಸ್ ಬಳಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೆ ಒಳಗಾದ 7 ಮಂದಿಯಲ್ಲಿ ನಾಲ್ಕು ಮಂದಿ ಕುಂದಾಪುರ ಸಮೀಪದ ಗಂಗೊಳ್ಳಿಯವರು ಎಂದು ಗುರುತಿಸಲಾಗಿದೆ.
ಚತುಷ್ಪಥ ಕಾಮಗಾರಿ ನಡೆಯುತ್ತಿದ್ದ ಕಾರಣದಿಂದ ರಸ್ತೆಯಲ್ಲಿನಿಯಂತ್ರಣ ತಪ್ಪಿದ್ದ ಟಿಪ್ಪರ್, ಇಂಡಿಕಾ ಹಾಗೂ ಹೊಂಡಾಸಿಟಿ ಕಾರುಗಳ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ಅಪಘಾತ ಉಂಟಾಗಿದೆ. ಅಪಘಾತ ತೀವ್ರತೆಗೆ ಇಂಡಿಕಾ, ಹೊಂಡಾಸಿಟಿ ಕಾರಿನಲ್ಲಿ ಇದ್ದ ಪ್ರಯಾಣಿಕರು ಪೈಕಿ ತಲಾ ಮೂರು ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ. ಗಾಯಗೊಂಡವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬರು ಮೃತಪಟ್ಟಿದ್ದಾರೆ.
ಹೊಂಡಾಸಿಟಿ ಕಾರಿನಲ್ಲಿ ಗಂಗೊಳ್ಳಿ ಮೂಲದ ಲೂವಿಸ್ ಪ್ರದೀಪ್ ಫೆರ್ನಾಂಡಿಸ್ (30), ಅವರ ಪತ್ನಿ ಪ್ರೀಯಾ (26), ಪುತ್ರ ಜೋತ್ಸ್ನಾ (4), ಮೈದಿನಿ ಫಿಲೋಮಿನಾ (24), ಸಹೋದರ ಸಂಬಂಧಿ ಸೋನಿಯಾ ಪಿಂಟೊ (26) ಕಾರು ಚಲಾಯಿಸುತ್ತಿದ್ದ ವಿಜಯ್(30) ಪ್ರಯಾಣಿಸುತ್ತಿದ್ದರು. ಈ ಪೈಕಿ ಪ್ರದೀಪ್ ಫರ್ನಾಂಡಿಸ್, ಅವರ ಮಗು ಜೋತ್ಸ್ನಾ ಹಾಗೂ ಸೋನಿಯಾ ಸ್ಥಳದಲ್ಲಿಯೇ ಮೃತರಾದರೆ, ನಾದಿನಿ ಫಿಲೋಮಿನಾ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರು ಬಿಟ್ಟಿದ್ದಾರೆ. ಅಪಘಾತದಲ್ಲಿ ಗಾಯಾಳುಗಳಾಗಿರುವ ಪ್ರಿಯಾ ಹಾಗೂ ವಿಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗಂಗೊಳ್ಳಿಯ ಚರ್ಚ್ ರಸ್ತೆಯ ನಿವಾಸಿಯಾದ ಕ್ಷಿಫರ್ಡ್ ಹಾಗೂ ಜೀನಿವಿವ್ ದಂಪತಿ ಪುತ್ರರಾಗಿದ್ದ ಪ್ರದೀಪ್ ಬೆಂಗಳೂರಿನಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಫಿಲೋಮಿನಾ ಗಂಗೊಳ್ಳಿಯ ಸೋಲೋಮನ್ ಲೋಬೋ ಹಾಗೂ ಐರಿನ್ ಲೋಬೋ ದಂಪತಿ ಪುತ್ರಿ. ಎಂಸಿಎ ಪದವೀಧರೆಯಾಗಿದ್ದ ಈಕೆ ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಉಪನ್ಯಾಸಕಿಯಾಗಿದ್ದ
ಸೋನಿಯಾ ಮೂಲತ: ಕುಂದಾಪುರ ತಾಲ್ಲೂಕಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿರುವ ವಾಲ್ಟರ್ ಪಿಂಟೋ, ಹೆಲನ್ ದಂಪತಿ ಪುತ್ರಿ.
ಕ್ರಿಸ್ಮಸ್ ಆಚರಣೆಗೆ ಬೆಂಗಳೂರಿನಿಂದ ಹುಟ್ಟೂರಿಗೆ ಬಂದಿದ್ದ ಅವರು ಮಂಗಳವಾರ ಮಧ್ಯರಾತ್ರಿಯ ಹೊಸ ವರ್ಷದ ಪೂಜೆ, ಸಂಭ್ರಮಾಚರಣೆಬಳಿಕ ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣಿಸಿದ್ದರು. ಶವಗಳನ್ನು ಗುರುವಾರ ಉಡುಪಿಗೆ ತರಲಾಗಿದ್ದು, ಶುಕ್ರವಾರ ಗಂಗೊಳ್ಳಿಯಲ್ಲಿ ಅಂತ್ಯವಿಧಿಗಳನ್ನು ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.