ಕುಂದಾಪುರ: ಗ್ರಾಮೀಣ ಭಾಗಕ್ಕೆ ಬಸ್ ಸಂಪರ್ಕ, 94 ಸಿ ಸಮಸ್ಯೆ, ತ್ರಾಸಿ ರಸ್ತೆ ಅಪಘಾತ, ಸುವರ್ಣ ಗ್ರಾಮ ಯೋಜನೆ ಯಡಿ ಅಸಮರ್ಪಕ ಕಾಮಗಾರಿ ಇತ್ಯಾದಿ ವಿಚಾರ ಮಂಗಳವಾರ ನಡೆದ ಕುಂದಾ ಪುರ ತಾಲ್ಲೂಕು ಪಂಚಾಯಿತಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗವೀರ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯ ಆರಂಭದಲ್ಲಿ ತ್ರಾಸಿ ಅಪಘಾತದಲ್ಲಿ ಮಡಿದ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಅಂಪಾರು– ಶಂಕರನಾರಾಯಣ ರಸ್ತೆಗೆ ಬಸ್ ಸಂಪರ್ಕದ ಬಗ್ಗೆ ಮಾತನಾಡಿದ ಸದಸ್ಯ ಉಮೇಶ ಶೆಟ್ಟಿ, ಅಂಪಾರು, ಬೈಲೂರು, ಕೊಂಡಳ್ಳಿ ಮಾರ್ಗವಾಗಿ ಶಂಕರನಾರಾಯಣಕ್ಕೆ ಬಸ್ ಸಂಪರ್ಕ ಕಲ್ಪಿಸುವಂತೆ ಎರಡು ವರ್ಷದಿಂದ ಒತ್ತಾ ಯಿಸುತ್ತಾ ಬಂದರೂ ಇನ್ನೂ ಪ್ರಯೋಜ ನವಾಗಿಲ್ಲ. ಬಸ್ ಮಂಜೂರಾತಿಯಾ ದರೂ ಸಮಯ ನಿಗದಿಪಡಿಸುವ ಕೆಲಸ ಸಾರಿಗೆ ಅಧಿಕಾರಿಗಳು ಮಾಡಿಲ್ಲ. ಬೈಲೂರು, ಕೊಂಡಳ್ಳಿ ಭಾಗದಲ್ಲಿ ಬೆಳಿಗ್ಗೆ ಶಾಲಾ ಸಮಯದಲ್ಲಿ ಮಕ್ಕಳು ತುಂಬಾ ಕಷ್ಟ ಪಡುತ್ತಿದ್ದಾರೆ.
ಹತ್ತು ದಿನಗಳ ಒಳಗೆ ಸಮಸ್ಯೆ ಪರಿಹರಿಸದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸದಸ್ಯ ಸಿದ್ದಾಪುರದ ವಾಸುದೇವ ಪೈ ಮತ್ತು ವಿಜಯ ಶೆಟ್ಟಿ ಇದಕ್ಕೆ ಧ್ವನಿಗೂಡಿಸಿದರು.
ಸರ್ಕಾರಿ ಶಾಲೆಗಳ ದುರಸ್ತಿಯ ಬಗ್ಗೆ ಸರಿಯಾಗಿ ಪರಿಶೀಲಿಸಿ ಅಗತ್ಯವಿರುವಲ್ಲಿಗೆ ಅನುದಾನ ಕಲ್ಪಿಸಬೇಕು. ಶಾಲಾ ಕಟ್ಟಡಗಳು ತುಂಬಾ ಶಿಥಿಲಗೊಂಡಿವೆ. ಈ ಬಗ್ಗೆ ಸ್ಥಳೀಯ ತಾಲ್ಲೂಕು ಪಂಚಾ ಯಿತಿ ಸದಸ್ಯರ ಗಮನಕ್ಕೆ ತಂದು ಅಧಿಕಾ ರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸದಸ್ಯೆ ಕುಂಭಾಶಿಯ ಜ್ಯೋತಿ ಪುತ್ರನ್ ಒತ್ತಾಯಿಸಿದರು.
94ಸಿ ಸಮಸ್ಯೆಯ ಬಗ್ಗೆ ಬೆಳ್ವೆಯ ಸದಸ್ಯ ಚಂದ್ರಶೇಖರ ಶೆಟ್ಟಿ ಗಮನ ಸೆಳೆದರು. ಶಂಕರನಾರಾಯಣ ಗ್ರಾಮ ಪಂಚಾಯಿತಿಗೆ 2011–12ನೇ ಸಾಲಿನಲ್ಲಿ ಸುವರ್ಣ ಗ್ರಾಮ ಯೋಜನೆಯಡಿ 1.20 ಕೋಟಿ ಮಂಜೂರಾತಿ ಆಗಿತ್ತು. ನಿರ್ಮಿತಿ ಕೇಂದ್ರದವರು 4 ಕಾಮಗಾರಿ ಮಾಡಿ ದ್ದು, ತೀರಾ ಕಳಪೆ ಗುಣಮಟ್ಟದ್ದಾಗಿದೆ. ರಸ್ತೆಗಳು ಕಿತ್ತು ಹೋಗಿವೆ.
ಪಶು ಚಿಕಿತ್ಸಾ ಕೇಂದ್ರದ ಬಾಗಿಲುಗಳು ಬಾಗಿ ಹೋಗಿವೆ. ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ಉಮೇಶ ಶೆಟ್ಟಿ ಕಲ್ಗದ್ದೆ ಆರೋಪಿಸಿದರು, ಉಳಿದಂತೆ ತಲ್ಲೂರು ಪಿಂಗಾಣಿಗುಡ್ಡೆ ಪ್ರದೇಶದಲ್ಲಿ ಬಹುತೇಕ ಮನೆಗಳಿಗೆ ಕುಡಿಯುವ ನೀರಿನ ನಳ್ಳಿ ಸಂಪರ್ಕ ಒದ ಗಿಸದ ಬಗ್ಗೆ, ನಾವುಂದ ಪ್ರೌಢಶಾಲೆಯ ಫಲಿತಾಂಶದಲ್ಲಿ ಆಗಿದ್ದ ಗೊಂದಲ ಉಂಟಾದ ಬಗ್ಗೆ ಚರ್ಚೆ ನಡೆಯಿತು. ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಕಡ್ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಇಒ ನಾರಾಯಣ ಸ್ವಾಮಿ ಇದ್ದರು.