ಕಾರ್ಕಳ: ‘ನನ್ನ ತಂದೆ ವೀರಪ್ಪ ಮೊಯಿಲಿ ಅವರಿಗೆ ದೇಶದಲ್ಲಿ ಅತ್ಯಂತ ಗೌರವದ ಸ್ಥಾನ ತಂದು ಕೊಟ್ಟವರು ಕಾರ್ಕಳದ ಜನತೆ’ ಎಂದು ಕರ್ನಾಟಕ ಕಾಂಗ್ರೆಸ್ ರಾಜ್ಯ ಸಮಿತಿಯ ವಕ್ತಾರ ಹರ್ಷ ಮೊಯಿಲಿ ಹೇಳಿದರು.
ಬಂಗ್ಲಗುಡ್ಡೆ ಕಜೆ ವಾರ್ಡ್ನ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾಯಿಸುವ ಮೂಲಕ ಇಲ್ಲಿನ ಜನತೆ ನನ್ನ ತಂದೆಯ ಮೇಲಿರುವ ಗೌರವವನ್ನು ಇನ್ನೊಮ್ಮೆ ವ್ಯಕ್ತಪಡಿಸಬೇಕು’ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪ್ರದೇಶ ರಾಜ್ಯ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, ‘ಉಭಯ ಜಿಲ್ಲೆಗಳಲ್ಲಿ ಬ್ಯಾಂಕ್, ಎಲ್.ಐ.ಸಿ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಎಲ್ಲೆಡೆ ಪ್ರಸಿದ್ಧಿ ಪಡೆದಿವೆ. ಬಿಜೆಪಿ ಸರ್ಕಾರ ಬಂದ ನಂತರ ಉಭಯ ಜಿಲ್ಲೆಗಳಲ್ಲಿ ರಕ್ತದ ಓಕುಳಿಯೇ ಹರಿಯುತ್ತಿದೆ. ನಮ್ಮನ್ನು ಆಳುತ್ತಿರುವ ಮೋದಿ ಸರ್ಕಾರವನ್ನು ಅದಷ್ಟು ಬೇಗ ಕಿತ್ತೊಗೆಯಬೇಕು’ ಎಂದರು.
ವಾರ್ಡ್ನ ಸದಸ್ಯರಾದ ಆಶ್ಫಕ್ ಅಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೊಟ್ಯಾನ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶೇಖರ್ ಮಡಿವಾಳ, ಕೃಷ್ಣಮೂರ್ತಿ, ಸುಭಿತ್ ಎನ್.ಆರ್, ಪ್ರಭಾಕರ್ ಬಂಗೇರ ಇದ್ದರು.