ಉಡುಪಿ: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಂಸ ರಫ್ತಿನ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. ಈ ಕೂಡಲೇ ಮಾಂಸ ರಫ್ತನ್ನು ನಿಲ್ಲಿಸಬೇಕು ಹಾಗೂ ಮಾಂಸ ರಫ್ತು ನಿಷೇಧ ಕಾಯ್ದೆ ಜಾರಿಗೊಳಿಸಬೇಕು’ ಎಂದು ವಿಶ್ವ ಪ್ರಾಣಿ ದಯಾ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ ಗೋಮಾಂಸ ಮಾತ್ರವಲ್ಲ, ಎಮ್ಮೆ, ಕೋಣ, ಒಂಟೆ ಯಾವುದೇ ಪ್ರಾಣಿಯ ಮಾಂಸವನ್ನು ಸಹ ರಫ್ತು ಮಾಡಬಾರದು. ಮಾಂಸ ರಫ್ತಿನ ಬಗ್ಗೆ ಸುಪ್ರೀಂ ಕೋರ್ಟ್ 2006ರಲ್ಲಿ ಆದೇಶ ನೀಡಿ ರಫ್ತು ನೀತಿಯನ್ನು ಪುನರ್ ಪರಿಶೀಲಿಸುವಂತೆ ಹೇಳಿದೆ.
ಆದರೂ ಕೇಂದ್ರ ಸರ್ಕಾರವು ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಭಾರತೀಯ ಸಂಸ್ಕೃತಿ– ಪರಂಪರೆಯನ್ನು ಎತ್ತಿ ಹಿಡಿಯುತ್ತೇನೆ ಎನ್ನುವ ಮೋದಿ ಅವರು ಈ ವಿಷಯದಲ್ಲಿ
ಮಾತ್ರ ಕ್ರಮ ಕೈಗೊಂಡಿಲ್ಲ’ ಎಂದರು.
‘ಗೋ ವಧೆ ಪ್ರತಿಬಂಧಕ ಕಾಯ್ದೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಗೀಕರಿಸಿ ರಾಜ್ಯಪಾಲ ಭಾರದ್ವಾಜ್ ಅವರಿಗೆ ಕಳುಹಿಸಲಾಗಿತ್ತು. ಆದರೆ ಅವರು ಅದಕ್ಕೆ ಸಹಿ ಹಾಕಲು ನಿರಾಕರಿಸಿದರು.
ಆ ನಂತರ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅದನ್ನು ಹಿಂದಕ್ಕೆ ಪಡೆಯಿತು. ಮುಖ್ಯಮಂತ್ರಿ ಅವರು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು. ಶಾಂತಾದೇವಿ, ಸುನಂದಾದೇವಿ, ಶಿವಪುತ್ರ ಸ್ವಾಮೀಜಿ, ಗುರು ಸಿದ್ದೇಶ್ವರ ಉಪಸ್ಥಿತರಿದ್ದರು.
* *
ಬಿಜೆಪಿ ಸರ್ಕಾರ ಗೋ ಮಾಂಸ ಹಾಗೂ ಇತರ ಎಲ್ಲ ಪ್ರಾಣಿಗಳ ಮಾಂಸದ ರಫ್ತನ್ನು ನಿಷೇಧಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ದಯಾನಂದ ಸ್ವಾಮೀಜಿ, ಡಬ್ಲ್ಯುಎಡಬ್ಲ್ಯುಬಿ ಅಧ್ಯಕ್ಷ